ಕರಾವಳಿ, ಮಲೆನಾಡಿನ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ
ಮಂಗಳೂರು,ಸೆ.20: ದ.ಕ., ಉಡುಪಿ, ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಅವರಿಗೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಸಹಕಾರ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ ಮನವಿ ಮಾಡಿದ್ದಾರೆ.
ನಗರದ ಬಂದರ್ ರಸ್ತೆಯ ಕ್ಯಾಂಪ್ಕೋ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಈ ಜಿಲ್ಲೆಗಳ ರೈತರು ಕೊಳೆರೋಗ ಮತ್ತಿತರ ಕಾರಣದಿಂದ ತುಂಬಾ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರಕಾರವು ಅವರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದಲ್ಲದೆ ವಿಶೇಷ ಪ್ಯಾಕೇಜ್ ಘೋಷಿಸಿ ರಕ್ಷಣೆಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಕೃಷಿಕರು ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿದ ಮೊತ್ತವನ್ನು ಸಾಲ ಮನ್ನಾ ಹಣದಲ್ಲಿ ಕಡಿತಗೊಳಿಸುವ ವಿವಾದಾತ್ಮಕ ತೀರ್ಮಾನವನ್ನು ಸರಕಾರ ಹಿಂದಕ್ಕೆಪಡೆದಿದೆ. ಇದು ಸಹಕಾರ ಭಾರತೀಯ ಸಮಿತಿಯ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.
ರಾಜ್ಯ ಸರಕಾರವು ಸಾಲ ಮನ್ನಾ ಘೋಷಣೆ ಮಾಡಿ ಸುಮಾರು 4 ತಿಂಗಳು ಕಳೆದಿದೆ. ಆದರೆ ಸರಕಾರದ ಅಸಮರ್ಪಕ ನೀತಿಯಿಂದಾಗಿ ಗೊಂದಲಕ್ಕೆ ಒಳಗಾಗಿರುವ ಸಾಲಗಾರರು ಕೃಷಿ ಸಾಲವನ್ನು ಮರುಪಾವತಿ ಮಾಡದಿದ್ದುದರಿಂದ ಸಹಕಾರ ಸಂಘಗಳ ಬಂಡವಾಳದ ಒಳಹರಿವು ತೊಂದರೆ ಆಗಿದೆ. ಇದರಿಂದ ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದುದರಿಂದ ಸಾಲ ಮನ್ನಾದ ಮೊಬಲಗನ್ನು ಸಹಕಾರ ಸಂಘಗಳಿಗೆ ತಕ್ಷಣ ಬಿಡುಗಡೆ ಮಾಡಬೇಕು. ಕೃಷಿ ಸಾಲಗಾರರ ಸಾಲದ ಖಾತೆಗಳಿಗೆ ಸಾಲ ಮನ್ನಾದ ಮೊಬಲಗನ್ನು ರಾಜ್ಯ ಸರಕಾರ ಜಮಾ ಮಾಡಿದ ನಂತರ ಋಣಮುಕ್ತ ಪತ್ರವನ್ನು ಕೃಷಿಕರಿಗೆ ನೀಡಲು ಆದೇಶಿಸಬೇಕು ಎಂದರು.
ಸಾಲ ಮನ್ನಾದ ಫಲಾನುಭವಿಯನ್ನು ಒಂದು ಕುಟುಂಬಕ್ಕೆ ಒಬ್ಬರಂತೆ ಸೀಮಿತಗೊಳಿಸಲಾಗಿದ್ದು, ಇದನ್ನು ಎಲ್ಲಾ ರದ್ದುಗೊಳಿಸಿ ಎಲ್ಲರ ಸಾಲ ಮನ್ನಾ ಮಾಡಬೇಕು. ಬೆಳೆ ಸಾಲವನ್ನು ರೂಪೇ ಡೆಬಿಟ್ಕಾರ್ಡ್ ಮೂಲಕ ವಿತರಿಸುವ ರಾಜ್ಯ ಸರಕಾರದ ಆದೇಶದಿಂದ ಕೃಷಿಕರು ಅನಾವಶ್ಯಕ ತೊಂದರೆಗೊಳಗಾಗುತ್ತಾರೆ. ಅಂದರೆ ಸಹಕಾರ ಸಂಘಗಳಲ್ಲಿ ರೂಪೇ ಡೆಬಿಟ್ ಕಾರ್ಡ್ ಸೌಲಭ್ಯವಿಲ್ಲದೆ ಇರುವುದರಿಂದ ರೈತರು ಸಹಕಾರ ಕ್ಷೇತ್ರದಿಂದ ವಿಮುಖರಾಗುವ ಅಪಾಯವಿದೆ. ಹಾಗಾಗಿ ಈ ಹಿಂದಿನಂತೆಯೇ ಸಹಕಾರ ಸಂಘಗಳ ಮುಖಾಂತರ ಸರಳ ಸಾಮಾನ್ಯವಾಗಿ ಕೃಷಿ ಸಾಲ ವಿತರಿಸುವ ನೀತಿಯನ್ನು ಮುಂದುವರಿಸಬೇಕು ಎಂದು ಕೊಂಕೋಡಿ ಪದ್ಮನಾಭ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯದರ್ಶಿ ಭಾರತಿ ಭಟ್, ಪ್ರಾಂತ ಸಂಘಟನಾ ಪ್ರಮುಖ್ ಎಸ್.ಆರ್.ಸತೀಶ್ಚಂದ್ರ, ಪ್ರಾಂತ ಸಹ ಸಂಘಟನಾ ಪ್ರಮುಖ್ ಹರೀಶ್ ಆಚಾರ್ಯ, ಪ್ರಾಂತ ಮಹಿಳಾ ಸಂಘಟನಾ ಪ್ರಮುಖ್ ಸುಮನಾ ಶರಣ್, ಜಿಲ್ಲಾಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ, ಕಾರ್ಯದರ್ಶಿ ಕೃಷ್ಣಪ್ಪ, ಮಂಗಳೂರ ನಗರ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಉಪಸ್ಥಿತರಿದ್ದರು.
ಸೆ.24-26ರಂದು ಪ್ರತಿಭಟನೆ: ಸಾಲ ಮನ್ನಾ ಕುರಿತಂತೆ ಸೆ.24ರಂದು ಸುಳ್ಯ ಮತ್ತು ಸೆ.26ರಂದು ಬಂಟ್ವಾಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕೊಂಕೋಡಿ ಪದ್ಮನಾಭ ತಿಳಿಸಿದರು.