ಗೂಡಿನಬಳಿ ಅತ್ಯಾಚಾರ ಪ್ರಕರಣ: ಜಮಾಅತ್ ಕಮಿಟಿ, ವಿವಿಧ ಸಂಘಟನೆಗಳಿಂದ ಮೌನ ಕಾಲ್ನಡಿಗೆ ಜಾಥಾ
ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಗೂಡಿನಬಳಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ
ಬಂಟ್ವಾಳ, ಸೆ. ೨೧: ಗೂಡಿನಬಳಿ ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ಹಾಗೂ ಆರೊಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ನೀಡುವಂತೆ ಒತ್ತಾಯಿಸಿ ಗೂಡಿನಬಳಿಯ ಜಮಾಅತ್ ಆಡಳಿತ ಕಮಿಟಿ, ವಿವಿಧ ಸಂಘಟನೆ ಹಾಗೂ ಸಮಸ್ತ ನಾಗರಿಕರು ಕಪ್ಪುಪಟ್ಟಿ ಧರಿಸಿ ಶುಕ್ರವಾರ ಬಿ.ಸಿ.ರೋಡ್ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಅಲ್ಲದೆ, ಪ್ರಕರಣವನ್ನು ಖಂಡಿಸಿ ಗೂಡಿನಬಳಿಯ ಅಂಗಡಿ ಮುಂಗಟ್ಟುಗಳನ್ನು ಮುಚ್ವುವ ಮೂಲಕ ಬಂದ್ ಆಚರಿಸಲಾಯಿತು.
ಈ ಲೈಂಗಿಕ ದೌರ್ಜನ್ಯ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಕಾನೂನು ರಕ್ಷಣೆ, ಪರಿಹಾರ ನೀಡಬೇಕು. ಪ್ರಕರಣದಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಕೂಡಾ ಬಂಧಿಸಬೇಕು. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳನ್ನು ಕೂಡಾ ಶಿಕ್ಷಿಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಬಗ್ಗೆ ಬಂಟ್ವಾಳ ತಹಶಿಲ್ದಾರ್ ಪುರಂದರ ಹೆಗ್ಡೆ ಹಾಗೂ ಬಂಟ್ವಾಳ ಎಸ್ಸೈ ಚಂದ್ರಶೇಖರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಾಥಾಕ್ಕೂ ಮೊದಲು ಗೂಡಿನಬಳಿ ಮಸೀದಿಯಲ್ಲಿ ಖಂಡನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಹಾಜಿ.ಜಿ.ಮುಹಮ್ಮದ್, ಪುರಸಭಾ ಮಾಜಿ ಸದಸ್ಯ ಇಕ್ಬಾಲ್ ಐಎಂಆರ್, ಜಿ.ಕೆ.ಅಹ್ಮದ್ ಬಾವ, ಜಿ.ಕೆ.ಬಶೀರ್, ಪತ್ರಕರ್ತ ಫಾರೂಕ್ ಗೂಡಿನಬಳಿ, ಅಬೂಬಕರ್ ಕೆ.ಎಚ್., ಲತೀಫ್ ಖಾನ್ ಅಬೂಬಕರ್, ಇಸ್ರಾರ್, ಫರ್ವೀಝ್, ಹಯಾಝ್ ಖಾನ್ ಹಾಗೂ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.