‘ಮೈ ನೇಮ್ ಈಸ್ ಅಣ್ಣಪ್ಪ’ ತುಳುಚಿತ್ರ ಬಿಡುಗಡೆ
ಮಂಗಳೂರು, ಸೆ.21: ಹೊಸ ತುಳುಚಿತ್ರ ‘ಮೈ ನೇಮ್ ಈಸ್ ಅಣ್ಣಪ್ಪ’ ಚಿತ್ರವು ಇಂದು ಕರಾವಳಿಯಾದ್ಯಂತ ಬಿಡುಗಡೆಯಾಯಿತು.
ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರವು ಅದ್ದೂರಿಯಾಗಿ ತೆರೆಕಂಡಿತು. ಲಕುಮಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ನಿರ್ಮಾಣವಾದ ಶ್ರೀ ದುರ್ಗಾ ಎಂಟರ್ಟೈನ್ಮೆಂಟ್’ ನಿರ್ಮಿಸಿದ ಈ ಚಿತ್ರಕ್ಕೆ ಒಡಿಯೂರು ಸ್ವಾಮೀಜಿ ಆಶೀರ್ವಚನ ನೀಡಿದರು.
ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನೀಡಿರುವ ಹಾಡುಗಳು ಕೂಡ ಭರ್ಜರಿ ಹಿಟ್ ಆಗಿವೆ.
ಯಕ್ಷಗಾನ ಲೋಕದ ಗಾನ ಗಂಧರ್ವರಾದ ದಿನೇಶ್ ಅಮ್ಮಣ್ಣಾಯ, ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ ಅವರು ಅಣ್ಣಪ್ಪನ ಹಾಡಿಗೆ ಧ್ವನಿಯಾಗಿದ್ದಾರೆ. ಪಟ್ಲ ಸತೀಶ್ ಶೆಟ್ಟಿ ‘ಮುಗುರು ತೆಲಿಪುದೆ’ ಎಂಬ ಹಾಡಿಗೆ ಧ್ವನಿಗೂಡಿಸಿದ್ದು, ಮನೋಹರವಾಗಿದೆ.
ಹಿರಿಯ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರು ‘ಕನ ನೀರ ಕಡಲ್’ ಎಂಬ ದಾಟಿಯ ಹಾಡಿಗೆ ಧ್ವನಿಗೂಡಿಸಿದ್ದಾರೆ. ಜತೆಗೆ ರವಿಚಂದ್ರ ಕನ್ನಡಿಕಟ್ಟೆ ಅವರು ‘ನಂದಾಕಿಶೋರ’ ಎಂಬ ಹಾಡಿಗೆ ಸ್ವರ ನೀಡುವ ಮೂಲಕ ಸಿನೆಮಾಕ್ಕೆ ಹೊಸ ಜೀವ ನೀಡಿದ್ದಾರೆ.
ಮಯೂರ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ರೋಹನ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಮಂಜು ರೈ, ಶುಭಾ ಶೆಟ್ಟಿ, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ, ಮಿಸ್ಟರ್ ಕರ್ನಾಟಕ ಇಂಟರ್ ನ್ಯಾಷನಲ್ ವಿಜೇತ ಸಂದೀಪ್ ಶೆಟ್ಟಿ ಕಾಟಿಪಳ್ಳ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ .