ಸರಕಾರಿ ನಿಯಮಾವಳಿಯಂತೆ ಕಂಬಳ ಆಚರಣೆಗೆ ಬದ್ಧ : ಕಂಬಳ ಸಮಿತಿ ಹೇಳಿಕೆ
ಮಂಗಳೂರು,ಸೆ.21: ಸರಕಾರವು ಕಂಬಳವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂಬ ಬಗ್ಗೆ ನಿಯಮಗಳನ್ನು ಸೂಚಿಸಿದೆ. ಅವುಗಳನ್ನು ಸಂಪೂರ್ಣವಾಗಿ ಪಾಲಿಸುವುದರೊಂದಿಗೆ ನಿಯಮಾವಳಿಯಂತೆಯೇ ಕಂಬಳ ಆಚರಿಸಲಾಗುವುದು ಎಂದು ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ರಾಜೀವ ಶೆಟ್ಟಿ ಎಡ್ತೂರು ತಿಳಿಸಿದ್ದಾರೆ.
ಶುಕ್ರವಾರ ನಗರದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಬಳವನ್ನು ಹಿಂಸೆ ಇಲ್ಲದ ರೀತಿಯಲ್ಲಿ ನಡೆಸಲು ಸಮಿತಿ ವತಿಯಿಂದ ನಿಯಮಗಳನ್ನು ರೂಪಿಸಲಾಗಿತ್ತು. ಕಳೆದ ವರ್ಷವೇ ಅದನ್ನು ಪಾಲಿಸಿದ್ದೆವು. ಇದೀಗ ಸರಕಾರ ಕೂಡ ರೂಪುರೇಷೆ ನೀಡಿದೆ. ಮುಂದಿನ ದಿನಗಳಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಗದ್ದೆಯ ಉದ್ದ ಹೆಚ್ಚಿಸಲು ಮನವಿ: ಸರಕಾರದ ರೂಪುರೇಷೆಯಲ್ಲಿ ಕಂಬಳ ಗದ್ದೆಯ ಉದ್ದ 120 ಮೀ. ಎಂದು ತಿಳಿಸಲಾಗಿದೆ. ಆದರೆ ಕನಿಷ್ಠ ಪಕ್ಷ 135 ಮೀ. ಉದ್ದವಾದರೂ ಬೇಕು. ಇಲ್ಲದಿದ್ದರೆ ಕೋಣಗಳನ್ನು ನಿಯಂತ್ರಣ ಮಾಡಲು ಕಷ್ಟವಾಗುತ್ತದೆ. ಇದನ್ನು ಸ್ವಲ್ಪ ಬದಲಾವಣೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಉಳಿದಂತೆ ಯಾವುದೇ ಆಕ್ಷೇಪಗಳಿಲ್ಲ ಎಂದು ರಾಜೀವ ಶೆಟ್ಟಿ ತಿಳಿಸಿದರು.
ಇತ್ತೀಚೆಗೆ ಪೇಟಾ ಸಂಘಟನೆಯ ಹಳೆಯ ಕ್ಲಿಪ್ಪಿಂಗ್ಗಳನ್ನೇ ಇಟ್ಟುಕೊಂಡು ಮತ್ತೆ ಕಂಬಳದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೋಣಗಳ ಬಾಯಲ್ಲಿ ನೊರೆಯಂಥ ವಸ್ತು ಬರುತ್ತದೆ, ಹಗ್ಗವನ್ನು ಬಿಗಿಯಾಗಿ ಕಟ್ಟಿ ಉಸಿರಾಡಲು ತೊಂದರೆಯಾಗುತ್ತದೆ, ಅವುಗಳನ್ನು ಸಾಗಿಸುವಾಗ ಮೆತ್ತನೆಯ ದಿಂಬು ಇಡುವುದಿಲ್ಲ, ಮೂಗುದಾರ ಕಟ್ಟುತ್ತಾರೆ ಇತ್ಯಾದಿ ಆರೋಪಗಳನ್ನೂ ಮಾಡಿದೆ. ಸ್ವಚ್ಛಂದ ಕಾಡುಕೋಣದ ಕಲ್ಪನೆಯನ್ನು ಇಟ್ಟುಕೊಂಡು ಇಂಥ ಆರೋಪ ಮಾಡಿರಬೇಕು ಎಂದು ರಾಜೀವ ಶೆಟ್ಟಿ ಲೇವಡಿ ಮಾಡಿದರು.
ಕಾಡು ಪ್ರಾಣಿಗಳಿಗೂ ಸಾಕುಪ್ರಾಣಿಗಳಿಗೂ ವ್ಯತ್ಯಾಸಗಳಿವೆ. ನಾವು ದನದಂತೆಯೇ ಕೋಣಗಳನ್ನೂ ಸಾಕುತ್ತೇವೆ. ದನಗಳಂತೆಯೇ ಅದಕ್ಕೂ ಮೂಗುದಾರ ಕಟ್ಟುತ್ತೇವೆ. ಕುದುರೆ ರೇಸ್ನಲ್ಲೂ ಎಂಟು ಏಟು ಹೊಡೆಯಬಹುದು ಎಂಬ ಕಾನೂನಿದೆ. ಆದರೆ ಕಂಬಳ ಸಂದರ್ಭದಲ್ಲಿ ಕೋಲು ಎತ್ತಿ ಹಿಡಿದ ಮಾತ್ರಕ್ಕೇ ಹಿಂಸೆ ಮಾಡಲೆಂದೇ ಕೋಲು ಹಿಡಿಯುವುದಾಗಿ ವಾದಿಸುವುದು ಸರಿಯಲ್ಲ ಎಂದರು.
ಸೆ.23ರಂದು ಮಹಾಸಭೆ: ಜಿಲ್ಲಾ ಕಂಬಳ ಸಮಿತಿಯ ವಿಶೇಷ ಮಹಾಸಭೆ ಸೆ.23ರಂದು ಅಪರಾಹ್ನ 2 ಗಂಟೆಗೆ ಮೂಡುಬಿದಿರೆಯ ಸ್ವರ್ಣ ಮಂದಿರದಲ್ಲಿ ನಡೆಯಲಿದೆ. ಈ ವರ್ಷ ಕಂಬಳ ಕ್ರೀಡೆಯನ್ನು ವ್ಯವಸ್ಥಿತವಾಗಿ ನಡೆಸಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಅಭಯಚಂದ್ರ ಜೈನ್, ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ರಾಜೀವ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಸುರೇಶ್ ಕೆ.ಪೂಜಾರಿ, ತ್ರಿಶಾಲ್ ಪೂಜಾರಿ, ವಲೇರಿಯನ್ ಡೇಸಾ ಮತ್ತಿತರರು ಉಪಸ್ಥಿತರಿದ್ದರು.
ಸುಪ್ರೀಂಗೆ ಅರ್ಜಿ
ಸುಪ್ರೀಂ ಕೋರ್ಟ್ನಲ್ಲಿ ಪೇಟಾ ಮತ್ತು ಸರಕಾರದ ನಡುವೆ ಪ್ರಕರಣವಿದೆ. ಇದರಲ್ಲಿ ಕಂಬಳ ಸಮಿತಿಯನ್ನೂ ಒಳಗೊಳಿಸಬೇಕು ಎಂದು ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅದಕ್ಕಾಗಿ ವಕೀಲರನ್ನೂ ನೇಮಕ ಮಾಡಲಾಗಿದೆ. ಇದರ ವಿಚಾರಣೆಯನ್ನು ನ್ಯಾಯಾಲಯ ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ ಎಂದು ಸಮಿತಿಯ ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿ ತಿಳಿಸಿದರು.