ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು: ಉದ್ಯಮಿ ಮುಸ್ತಫಾ ಎಸ್.ಎಂ.
ಟ್ಯಾಲೆಂಟ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಮಂಗಳೂರು, ಸೆ. 22: ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಬೆಳಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಜಗತ್ತಿಗೆ ಅನಾವರಣ ಮಾಡಬಹುದು. ನಮ್ಮಲ್ಲಿ ಏನು ಇಲ್ಲ ಎಂದು ಕೊರಗುವುದಕ್ಕಿಂತ ಸರ್ವಶಕ್ತನು ನಮಗೆ ಕೊಟ್ಟ ಅನುಗ್ರಹಗಳನ್ನು ಪೂರ್ಣವಾಗಿ ಬಳಸಿಕೊಂಡು ಸಾಧಕರಾಗಬಹುದು. ಅನೇಕ ಕಷ್ಟಗಳನ್ನು ಸಹಿಸಿ ನಮ್ಮನ್ನು ಬೆಳೆಸಿದ ನಮ್ಮ ಹೆತ್ತವರ ತ್ಯಾಗದ ನೆನಪು ಸದಾ ನಮ್ಮಲ್ಲಿ ಇರಬೇಕು ಎಂದು ಭಾರತ್ ಇನ್ಫ್ರಾಟೆಕ್ನ ಆಡಳಿತ ನಿರ್ದೇಶಕ, ಉದ್ಯಮಿ ಮುಸ್ತಫಾ ಎಸ್.ಎಂ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಡೆದ ತಂದೆ/ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರೇರಣಾ ತರಗತಿಯನ್ನು ನಡೆಸುತ್ತಾ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಕಾರ್ಯಕ್ರಮದ ಉಪಯುಕ್ತತೆಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಗತಿಯನ್ನು ನಡೆಸಿ ಸಾಧನೆಗೆ ಪ್ರೇರಣೆ ನೀಡಿದ ಉದ್ಯಮಿ ಮುಸ್ತಫಾ ಎಸ್.ಎಂ ಅವರನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದದಲ್ಲಿ ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ನಂಡೆ ಪೆಂಙಳ್ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ವಾರ್ತಾಭಾರತಿಯ ಮುಹಮ್ಮದ್ ಮುಸ್ಲಿಂ ಕೊಪ್ಪ, ಟಿ.ಆರ್.ಎಫ್. ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು, ಸದಸ್ಯರಾದ ಮಜೀದ್ ತುಂಬೆ, ನಕಾಶ್ ಬಾಂಬಿಲ, ಹುಸೈನ್ ಬಡಿಲ ಮೊದಲಾದವರು ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.