ಜಿಎಸ್ಟಿ ಆಯುಕ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ
ಉಡುಪಿ, ಸೆ. 22: ಕೇಂದ್ರ ಸರಕಾರದ ಜಿಎಸ್ಟಿ ಆಯುಕ್ತ ರಾಜೇಶ್ ಪ್ರಸಾದ್ ಅವರು ಹಿರಿಯಡ್ಕದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗುವುದು ಹೇಗೆ ಎಂಬ ವಿಷಯದ ಕುರಿತು ಮಾಹಿತಿಗಳನ್ನು ನೀಡಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳ ಅನೇಕ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಿಸಿದರು. ಪೆಟ್ರೋಲಿಯಂ ಉತ್ಪನ್ನಗಳಿಗೂ ಜಿಎಸ್ಟಿ ಅನ್ವಯಿಸಿದರೆ ದರ ಕಡಿಮೆಯಾಗ ಬಹುದೇ? ಜಿಎಸ್ಟಿಯಿಂದ ಸಾರ್ವಜನಿಕರಿಗೆ ಏನು ಪ್ರಯೋಜನ ಇವೇ ಮುಂತಾದ ಅನೇಕ ಪ್ರಶ್ನೆಗಳಿಗೆ ವಿಸ್ತೃತ ಉತ್ತರ ನೀಡಿದರು.
ಹಿರಿಯಡ್ಕ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ಜೀವನದ ದಿನಗಳನ್ನು ರಾಜೇಶ್ ಪ್ರಸಾದ್ ಮೆಲುಕುಹಾಕಿದರು. ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಹಾಗೂ ಲಯನ್ಸ್ ಕ್ಲಬ್ ಹಿರಿಯಡ್ಕ ವತಿಯಿಂದ ರಾಜೇಶ್ ಪ್ರಸಾದ್ರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡಕ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಲಯನ್ಸ್ ಕ್ಲಬ್ನ ಪ್ರಾಂತೀಯ ಅಧ್ಯಕ್ಷ ಶಶಿಕುಮಾರ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಮರನಾಥ ಶೆಟ್ಟಿ, ಸಮನ್ವಯಾಧಿಕಾರಿ ಡಾ.ಎನ್.ಎಸ್. ಶೆಟ್ಟಿ, ಉಪಪ್ರಾಂಶುಪಾಲ ಶಾರದಾ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಎಸ್.ವಿ.ಭಟ್ಟ ಸ್ವಾಗತಿಸಿ ದೇವದಾಸ್ ಪ್ರಭು ವಂದಿಸಿದರು. ನಳಿನಾದೇವಿ ಕಾರ್ಯಕ್ರಮ ನಿರ್ವಹಿಸಿದರು.