ಅಲ್ಝೈಮರ್ ರೋಗದ ಸಂತಸ್ತರಿಗೆ ವೈದ್ಯಕೀಯ ನೆರವು ನೀಡಲು ಆಗ್ರಹ
ಮಂಗಳೂರು, ಸೆ.22: ವಿಶ್ವ ಅಲ್ಝೈಮರ್ (ಅಸಹಜ ಮರೆವಿನ ರೋಗ) ಸಮಸ್ಯೆ ಪರಿಹಾರಕ್ಕೆ ವೈದ್ಯಕೀಯ ನೆರವು ನೀಡಲು ಸರಕಾರ ಅನುದಾನ ನೀಡಬೇಕು ಎಂದು ನಗರದ ಪೇಜ್ ಸಂಸ್ಥೆ ಜಿಲ್ಲಾಧಿಕಾರಿಯ ಮೂಲಕ ಕರ್ನಾಟಕ ಸರಕಾರಕ್ಕೆ ಇಂದು ಮನವಿ ಸಲ್ಲಿಸಿದೆ.
ಕೇರಳದಲ್ಲಿ ಈ ರೀತಿಯ ಕಾಯಿಲೆಯ ಚಿಕಿತ್ಸೆಗೆ ಸರಕಾರ ನೆರವು ನಿಡುತ್ತಿದೆ.ಅದೇ ಮಾದರಿಯಲ್ಲಿ ಕರ್ನಾಟದಲ್ಲೂ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಲು ಸರಕಾರ ಮುಂದಾಗಬೇಕು ಎಂದು ದ.ಕ ಜಿಲ್ಲಾ ಪೇಜ್ ಸಂಸ್ಥೆಯ ಕಾರ್ಯದರ್ಶಿ ಜೆರಾರ್ಡಿನ್ ಡಿ ಸೋಜ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ರವರಿಗೆ ಪುರಭವನದಲ್ಲಿಂದು ಹಮ್ಮಿಕೊಂಡ ವಿಶ್ವ ಅಲ್ಝೈಮರ್ ದಿನದ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿ ತಿಳಿಸಿದರು.
ಸಮಾರಂಭದಲ್ಲಿ ಪೇಜ್ ಸಂಘಟನೆಯ ಅಧ್ಯಕ್ಷೆ ಡಾ.ಒಲಿಂಡಾ ಪಿರೇರಾ ಅಧ್ಯಕ್ಷತೆವಹಿಸಿದ್ದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾನ ಇಲಾಖೆಯ ಉಪ ನಿರ್ದೇಶಕ ಸುಂದರ ಪುಜಾರಿ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ, ಹಿರಿಯ ನ್ಯಾಯಾಧೀಶ ಮಲ್ಲಣ ಗೌಡ, ಯೆನೆಪೊಯ ವಿ.ವಿ.ಕುಲಸಚಿವ ಶ್ರೀಕುಮಾರ್ ಮೆನನ್ , ಪೇಜ್ನ ಉಪಾಧ್ಯಕ್ಷ ಡಾ.ಪ್ರಭಾ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.