ಯಕ್ಷಗಾನ ಮನುಕುಲಕ್ಕೆ ಸಹಕಾರಿ: ಡಿ.ಹರ್ಷೇಂದ್ರ ಕುಮಾರ್
ಮೂಡುಬಿದಿರೆ, ಸೆ. 22: ಯಕ್ಷಗಾನದಿಂದ ಜನರಿಗೆ ಅನುಕೂಲವಾದ ವಿಚಾರ ಸಿಗುತ್ತಿದ್ದು ಪಂಡಿತರ ವಿಮರ್ಶೆಯಿಂದ ಪುಸ್ತಕದಿಂದ ಹೊರತಾದ ಮಾಹಿತಿ ಗಳು ಬದುಕನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಉಪಕಾರಿಯಾಗಿರುವುದಲ್ಲದೆ ಯಕ್ಷಗಾನ ಈ ನಿಟ್ಟಿನಲ್ಲಿ ಮನುಕುಲಕ್ಕೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ತಿಳಿಸಿದರು.
ಸ್ಕೈ ಪೈಂಟ್ ಮೂಡುಬಿದಿರೆ ವತಿಯಿಂದ ನಡೆದ ತಾಳಮದ್ದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿ ಮಾತನಾಡಿ ಉದ್ಯಮವನ್ನು ಪ್ರಾರಂಭಿಸುವುದು ಮುಖ್ಯವಲ್ಲ ಈ ಸ್ಪರ್ಧಾತ್ಮಕ ಯುಗದಲ್ಲಿ ಉತ್ಪನ್ನದ ಗುಣಮಟ್ಟ ಕಾಯ್ದಿರಿಸಿಕೊಳ್ಳುವ ಜೊತೆಗೆ ಹೋರಾಡುವುದು ಮುಖ್ಯ. ಉದ್ಯಮದ ಜೊತೆಗೆ ಕಲಾಪೋಷಣೆ ಮಾಡುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಕಲಾವಿದ ದಾಮೋದರ ಸಪಳಿಗ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಜಿ ಸಚಿವರಾದ ಕೆ. ಅಮರನಾಥಶೆಟ್ಟಿ, ಕೆ. ಅಭಯಚಂದ್ರ ಜೈನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು. ಉದ್ಯಮಿ ಶೈಲೇಂದ್ರ ಕುಮಾರ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಆ ಬಳಿಕ ಪಾದುಕಾ ಪ್ರದಾನ, ಭೀಷ್ಮವಿಜಯ, ಮತ್ತು ಕೃಷ್ಣ ಸಂಧಾನದ ತಾಳಮದ್ದಲೆ ನಡೆಯಿತು.