ಯೆಯ್ಯಾಡಿ: ಕೊಲೆಯತ್ನ ಆರೋಪಿ ಸೆರೆ
ಮಂಗಳೂರು, ಸೆ. 22: ನಗರ ಹೊರವಲಯದ ಯೆಯ್ಯಾಡಿಯಲ್ಲಿ ಗುರುವಾರ ರಾತ್ರಿ ನಡೆದ ಡೇನಿಯಲ್ ಫೆರ್ನಾಂಡಿಸ್ ಕೊಲೆಯತ್ನ ಪ್ರಕರಣದ ಆರೋಪಿ ಜಗದೀಶ್ ಶೆಟ್ಟಿ ಎಂಬಾತನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಡೇನಿಯಲ್ ಫೆರ್ನಾಂಡಿಸ್ ಮತ್ತು ಜಗದೀಶ್ ಶೆಟ್ಟಿ ಇಬ್ಬರೂ ಕೆಲವು ಸಮಯದಿಂದ ಜತೆಯಾಗಿ ಯೆಯ್ಯಾಡಿ ಆಸುಪಾಸು ಕೂಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ರಸ್ತೆ ಬದಿ ಮಲಗುತ್ತಿದ್ದರು ಎನ್ನಲಾಗಿದೆ. ಕೆಲವೊಮ್ಮೆ ಮದ್ಯಪಾನ ಸೇವಿಸಿ ಜಗಳಾಡುತ್ತಿದ್ದರು ಎಂದು ಹೇಳಲಾಗಿದೆ.
ಗುರುವಾರ ಸಂಜೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ಜಗಳ ಶುರುವಾಗಿ ತಾರಕಕ್ಕೇರಿತ್ತು. ಬಳಿಕ ಡೇನಿಯಲ್ ಫೆರ್ನಾಂಡಿಸ್ ಮಲಗಿದ್ದ ವೇಳೆ ಜಗದೀಶ್ ಶೆಟ್ಟಿ ಕಲ್ಲೊಂದನ್ನು ಎತ್ತಿ ಡೇನಿಯಲ್ ಫೆರ್ನಾಂಡಿಸ್ನ ತಲೆ ಮೇಲೆ ಹಾಕಿದ್ದನು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅವರಿಗೆ ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶನಿವಾರ ಖಾಸಗಿ ಆಸ್ಪತ್ರೆಯಿಂದ ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.