ನಾಪತ್ತೆಯಾಗಿದ್ದ ಗಂಜಿಮಠದ ಯುವಕನ ಮೃತದೇಹ ತಮಿಳುನಾಡಿನಲ್ಲಿ ಪತ್ತೆ
ಮಂಗಳೂರು, ಸೆ. 23: ನಾಪತ್ತೆಯಾಗಿದ್ದ ಬಡಗ ಉಳಿಪಾಡಿ ಗ್ರಾಮದ ಗಂಜಿಮಠ ಸಮೀಪದ ಜೆ.ಎಂ. ರಸ್ತೆ ನಿವಾಸಿ ಮುಹಮ್ಮದ್ ಸಮೀರ್ (35) ಅವರ ಮೃತದೇಹ ತಮಿಳುನಾಡಿನಲ್ಲಿ ಪತ್ತೆಯಾಗಿದೆ.
ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಸಮೀರ್ ರನ್ನು ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ. ಸಮೀರ್ ಅವರ ವಾಚ್ ಮತ್ತು ಶೂ ಅನ್ನು ಅವರ ಸಹೋದರ ಪತ್ತೆ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೆ.13ರಂದು ಮುಹಮ್ಮದ್ ಸಮೀರ್ ತನ್ನ ಪತ್ನಿ ಫಿರ್ದೌಸ್ ಮತ್ತು ಮೂರು ತಿಂಗಳ ಹೆಣ್ಣು ಮಗುವಿನೊಂದಿಗೆ ತನ್ನ ಮನೆಯಿಂದ ಬೆಂಗಳೂರಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹೋದವರು ಮರಳಿ ಬಂದಿಲ್ಲ ಎಂದು ಸಮೀರ್ ತಂದೆ ಅಹ್ಮದ್ ಸಾಹೇಬ್ ಬಜ್ಪೆ ಠಾಣೆಗೆ ದೂರು ನೀಡಿದ್ದರು.
ಸೆ.15ರಂದು ಸಂಜೆ ತನ್ನ ತಾಯಿಗೆ ದೂರವಾಣಿ ಕರೆ ಮಾಡಿದ ಮುಹಮ್ಮದ್ ಸಮೀರ್ ತಾನು ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದು, ಬಳಿಕ ಮುಹಮ್ಮದ್ ಸಮೀರ್ ಮನೆಯವರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಈ ಮಧ್ಯೆ ಸೆ.18ರಂದು ಫಿರ್ದೌಸ್ ತನ್ನ ಮಗುವಿನೊಂದಿಗೆ ತಾಯಿಯ ಮನೆಯಾದ ಕಾಪುವಿಗೆ ಬಂದಿದ್ದರು. ಆಕೆಯಲ್ಲಿ ಸಮೀರ್ನ ಬಗ್ಗೆ ವಿಚಾರಿಸಿದಾಗ ಆತ ಬೇರೆ ಹುಡುಗಿಯ ಸಂಪರ್ಕದಲ್ಲಿದ್ದು, ತನ್ನನ್ನು ಮತ್ತು ಮಗುವನ್ನು ಕಾಪುವಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.