ಮಲ್ಲಿಗೆ ಕೃಷಿಗೆ ಪರಿಹಾರ ಘೋಷಿಸಿ: ಶರ್ಮ ಒತ್ತಾಯ
ಉಡುಪಿ, ಸೆ.23: ಅತಿವೃಷ್ಟಿಯ ಕಾರಣ ಉಡುಪಿ ಜಿಲ್ಲೆಯಲ್ಲಿ ಬೇರೆಲ್ಲ ಬೆಳೆಗಳಿಗಿಂತ ಮಲ್ಲಿಗೆ ಬೆಳೆ ಸೇ.90ಕ್ಕಿಂತಲೂ ಅಧಿಕ ಹಾನಿಗೊಳಗಾಗಿದೆ. ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿವೆ. ಇದರಿಂದಾಗಿ ಮುಂದಿನ ಮಾರ್ಚ್ ತನಕ ಮಲ್ಲಿಗೆ ಇಳುವರಿ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಮಲ್ಲಿಗೆ ಬೆಳೆಗಾರರಿಗೆ ಸರಕಾರವು ಗಿಡವೊಂದಕ್ಕೆ 500 ರೂ.ಗಳ ಪರಿಹಾರ ನೀಡಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಒತ್ತಾಯಿಸಿದ್ದಾರೆ.
ಜಿಲ್ಲಾ ಕೃಷಿಕ ಸಂಘದ ಹಿರಿಯಡ್ಕ ವಲಯ ಸಮಿತಿ, ಪೆಲತ್ತೂರು ಗುಡ್ಡೆಯಂಗಡಿ ಸರೋಜಿನಿ ನಾಯ್ಕೆ ಇವರ ಮನೆ ವಠಾರದಲ್ಲಿ ಆಯೋಜಿಸಿದ್ದ ಮಲ್ಲಿಗೆ ಕೃಷಿ ಮಾಹಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ಮಲ್ಲಿಗೆ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತು ರಾಷ್ಟ್ರೀಯ ಸಾಧನಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ್ ಭಟ್ ಮಾಹಿತಿ ನೀಡಿದರು.
ಸರೋಜಿನಿ ನಾಯ್ಕ, ವಿಜಯಾ ಪೆಲತ್ತೂರು ಮೊದಲಾದವರು ಉಪಸ್ಥಿತರಿದ್ದರು. ಸದಾನಂದ ನಾಯಕ್ ಪೆರ್ಣಂಕಿಲ ಸ್ವಾಗತಿಸಿದರು. ಸುಭಾಸ್ ನಾಯ್ಕಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.