ಮಣಿಪಾಲ: ಕಾರಿನೊಳಗೆ ಉದ್ಯಮಿಯ ಮೃತದೇಹ ಪತ್ತೆ
ಚಾಕುವಿನಿಂದ ಹೊಟ್ಟೆಗೆ ಇರಿದು ಆತ್ಮಹತ್ಯೆ ಮಾಡಿರುವ ಶಂಕೆ
ಮಣಿಪಾಲ, ಸೆ.24: ಕಾರಿನೊಳಗೆ ಚಾಕುವಿನಿಂದ ಇರಿದು ಮೃತಪಟ್ಟ ಸ್ಥಿತಿ ಯಲ್ಲಿ ಉದ್ಯಮಿಯೊಬ್ಬರ ಮೃತದೇಹವು ಇಂದು ಬೆಳಗ್ಗೆ 9:30ರ ಸುಮಾರಿಗೆ ಮಣಿಪಾಲ- ಪೆರಂಪಳ್ಳಿ ರಸ್ತೆಯ ವಿದ್ಯಾರತ್ನ ರಸ್ತೆಯಲ್ಲಿ ಪತ್ತೆಯಾಗಿದ್ದು, ಮೃತರು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಮೃತರನ್ನು ಮಣಿಪಾಲ ಲಕ್ಷ್ಮೀಂದ್ರನಗರ 4ನೆ ಕ್ರಾಸ್ನ ಓಲಿವೆರಾ ಲೂವಿಸ್ (68) ಎಂದು ಗುರುತಿಸಲಾಗಿದೆ. ಮರ್ಚಂಟ್ ಹಡಗಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಲಿವೇರಾ ಲೂವಿಸ್, 2004-05ರ ವೇಳೆ ಕೆಲಸ ತೊರೆದಿದ್ದರು. ನಂತರ ಅವರು ಉಡುಪಿ ಹಾಗೂ ಮಣಿಪಾಲ ಪರಿಸರದಲ್ಲಿ ಬಿಲ್ಡರ್ ಆಗಿ ಕೆಲಸ ಮಾಡುತ್ತಿದ್ದರು.
ಸೆ.23ರಂದು ರಾತ್ರಿ 9:30ರ ಸುಮಾರಿಗೆ ಮನೆಯಿಂದ ತನ್ನ ಫೋರ್ಡ್ ಫಿಗೋ ಕಾರಿನಲ್ಲಿ ಹೊರಟ ಓಲಿವೆರಾ ಲೂವಿಸ್, ತನ್ನ ಸಂಬಂಧಿಕರ ಮನೆ ಇರುವ ವಿದ್ಯಾರತ್ನ ರಸ್ತೆಯಲ್ಲಿ ನಿಲ್ಲಿಸಿದ ತನ್ನ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕಾರಿನ ಎದುರಿನ ಎಡ ಸೀಟಿನಲ್ಲಿ ಕುಳಿತಿದ್ದ ಸ್ಥಿತಿಯಲ್ಲಿದ್ದ ಇವರ ಬಲ ಗೈಯಲ್ಲಿ ಚಾಕು ದೊರೆತಿದೆ. ಹೊಟ್ಟೆ ಹಾಗೂ ಕೈಯನ್ನು ಇರಿದಿರುವುದು ಕಂಡು ಬಂದಿದೆ. ಆದರೆ ಬಟ್ಟೆ ಹಾಗೂ ಒಳಗಿನ ಬನಿಯನ್ ಎಲ್ಲೂ ಹರಿದಿಲ್ಲ.
ಕಾರಿನ ಎಲ್ಲ ಡೋರ್ಗಳಿಗೆ ಲಾಕ್ ಹಾಕಿರುವುದರಿಂದ ಹಿಂಬದಿ ಡೋರ್ನ ಗಾಜನ್ನು ಒಡೆದು ಮೃತದೇಹವನ್ನು ಹೊರಗೆ ತೆಗೆಯಲಾಯಿತು. ಕಾರಿನ ಕೀ ಕೂಡ ಒಳಗಡೆಯೇ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬಿ. ನಿಂಬರ್ಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಕುಮಾರ ಸ್ವಾಮಿ, ಮಣಿಪಾಲ ಪೊಲೀಸ್ ನಿರೀಕ್ಷಕ ುದರ್ಶನ್ ಪರಿಶೀಲನೆ ನಡೆಸಿದ್ದಾರೆ.
ಮರಣ ಪತ್ರ ಪತ್ತೆ: ಓಲಿವೆರಾ ಲೂವಿಸ್ ಮೃತಪಟ್ಟ ಕಾರಿನೊಳಗೆ ಮರಣ ಪತ್ರ ಪತ್ತೆಯಾಗಿದೆ. ಆದುದರಿಂದ ಅವರ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಕಾರಿನಲ್ಲಿ ಪತ್ತೆಯಾದ ಆಧಾರ್ ಕಾರ್ಡ್ನ ಝೆರಾಕ್ಸ್ ಪ್ರತಿಯ ಹಿಂಬದಿ ಯಲ್ಲಿ ‘ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದು ಸಹಿ ಹಾಕಲಾಗಿದೆ. ಅಲ್ಲದೆ ಅವರ ಮೊಬೈಲ್ ನಂಬರ್ ಕೂಡ ನಮೂದಿಸಲಾಗಿದೆ. ಈ ಕೈಬರಹ ಓಲಿವೆರಾ ಲೂವಿಸ್ ಅವರದ್ದೆ ಎಂದು ಕುಟುಂಬದವರು ಧೃಢಪಡಿಸಿದ್ದಾರೆ.
ಅಲ್ಲದೆ ಇಂದು ನಸುಕಿನ ವೇಳೆ 1:30ರ ಸುಮಾರಿಗೆ ಸಾಯುವ ಮೊದಲು ಓಲಿವೆರಾ ಲೂವಿಸ್, ತನ್ನ ಪತ್ನಿ ಶಾಂತಿ ಗ್ರೇಸ್ ಲೂವಿಸ್ ಅವರ ಮೊಬೈಲ್ಗೆ ‘ಜಾಗೃತೆ ವಹಿಸಿ, ಸಂತೋಷವಾಗಿರಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಿ’ ಎಂಬ ಸಂದೇಶ ಕಳುಹಿಸಿದ್ದರೆನ್ನಲಾಗಿದೆ.
ನಂತರ ಓಲಿವೆರಾ ಲೂವಿಸ್ ಕಾರಿನ ಎಲ್ಲ ಡೋರ್ಗಳನ್ನು ಲಾಕ್ ಮಾಡಿಕೊಂಡು ಚಾಕುವಿನಿಂದ ಕೈ ಹಾಗೂ ಹೊಟ್ಟೆಯನ್ನು ಇರಿದುಕೊಂಡಿದ್ದರೆನ್ನಲಾಗಿದೆ. ಇದರಿಂದ ರಕ್ತಸ್ರಾವ ಉಂಟಾಗಿ ಅವರು ಕಾರಿನಲ್ಲೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಮೃತದೇಹವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಓಲಿವೆರಾ ಲೂವಿಸ್ರ ಸಾವು ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದಾಗಿ ಕಂಡು ಬಂದಿದ್ದು, ಮರಣೋತ್ತರ ಪರೀಕ್ಷೆಯಿಂದ ಅದು ದೃಢಪಡಬೇಕಾಗಿದೆ. ಮೃತರ ಕೈಯಲ್ಲಿ ಚಾಕು ಪತ್ತೆಯಾಗಿದ್ದು, ಹೊಟ್ಟೆಯನ್ನು ಇರಿದುಕೊಳ್ಳಲಾಗಿದೆ. ಮರಣ ಪತ್ರ ಕೂಡ ಅವರ ಕಾರಿನಲ್ಲಿ ದೊರೆತಿದೆ.
-ಲಕ್ಷ್ಮಣ್ ಬಿ.ನಿಂಬರ್ಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ