ಮೂಡುಬಿದಿರೆ: ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಪ್ರಥಮ
ಮೂಡುಬಿದಿರೆ, ಸೆ.24: ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ತಾಲೂಕು ಗ್ರಾಮಾಂತರ ಮಟ್ಟದ ವಾಲಿಬಾಲ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಆಳ್ವಾಸ್ ಪಿ.ಯು. ಕಾಲೇಜು ಪ್ರಥಮ ಸ್ಥಾನ ಮತ್ತು ಮಹಾವೀರ ಪಿ.ಯು. ಕಾಲೇಜು ದ್ವಿತೀಯ ಸ್ಥಾನವನ್ನೂ ಪಡೆದುಕೊಂಡಿದೆ.
ಆಳ್ವಾಸ್ ಕಾಲೇಜಿನ ಕಲ್ಯಾಣ್ ಕುಮಾರ್ ಬೆಸ್ಟ್ಅಟ್ಯಾಕರ್ ಹಾಗೂ ಮಹಾವೀರ ಕಾಲೇಜಿನ ಚಂದನ್ ಕುಮಾರ್ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಪಿ.ಯು. ಕಾಲೇಜು ಪ್ರಥಮ ಸ್ಥಾನ ಮತ್ತು ಎಸ್.ಡಿ.ಪಿ.ಟಿ. ಪಿ.ಯು. ಕಾಲೇಜು, ಕಟೀಲು ದ್ವಿತೀಯ ಸ್ಥಾನವನ್ನೂ ಪಡೆದುಕೊಂಡಿದೆ. ಆಳ್ವಾಸ್ ಕಾಲೇಜಿನ ತೇಜ ಬೆಸ್ಟ್ ಅಟ್ಯಾಕರ್ ಹಾಗೂ ಎಸ್.ಡಿ.ಪಿ.ಟಿ. ಕಾಲೇಜಿನ ಕವಿತ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಪಡೆದರು. ಈ ಪಂದ್ಯಾಟದಲ್ಲಿ ಮಂಗಳೂರು ತಾಲೂಕು ಗ್ರಾಮಾಂತರ ಮಟ್ಟದ 21 ಪದವಿಪೂರ್ವ ಕಾಲೇಜುಗಳು ಭಾಗವಹಿಸಿದ್ದವು.
ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಉದ್ಯಮಿಯೂ ಆಗಿರುವ ಅರುಣ್ ಮೆಂಡಿಸ್ ಪಂದ್ಯಾಟವನ್ನು ಉದ್ಘಾಟಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮೂಡುಬಿದಿರೆಯ ಪಂಡಿತ್ ರೆಸಾರ್ಟ್ನ ಲಾಲ್ ಗೋಯಲ್, ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ದೀಕ್ಷಿತ್, ಕಾಲೇಜಿನ ಟ್ರಸ್ಟಿ ರಾಮ್ಪ್ರಸಾದ್ ಭಟ್, ಕ್ರೀಡಾ ಸಂಯೋಜಕ ವಿಜಯಕುಮಾರ್ ಉಪಸ್ಥಿತರಿದ್ದು ಪಂದ್ಯಾಟಕ್ಕೆ ಶುಭವನ್ನು ಹಾರೈಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜ್ಪ್ರಸಾದ್ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌರವಿ ಪೈ ಕಾರ್ಯಕ್ರಮ ನಿರೂಪಿಸಿದರು.