ಪುತ್ತೂರು : ಹಲ್ಲೆ ಪ್ರಕರಣದ ಆರೋಪಿ 17 ವರ್ಷದ ಬಳಿಕ ಬಂಧನ
ಪುತ್ತೂರು,ಸೆ.24; ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಗುರುಂಪುನಾರು ಎಂಬಲ್ಲಿ 17 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ 16 ವರ್ಷಗಳಿಂದ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಇದೀಗ ಬಂಧಿಸಿದ್ದಾರೆ.
ಮಹಮ್ಮದ್ ಸಿಗ್ಬತ್ ಬಂಧಿತ ಆರೋಪಿ. ಪ್ರಕರಣದ ಬಳಿಕ ಕಳೆದ 16 ವರ್ಷಗಳಿಂದ ದುಬೈಗೆ ತೆರಳಿ ತಲೆ ಮರೆಸಿಕೊಂಡಿದ್ದ ಆರೋಪಿ ಸೆ.22 ರಂದು ದುಬೈನಿಂದ ವಿಮಾನದಲ್ಲಿ ಬಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕಳೆದ 2001ರ ಆಗಸ್ಟ್ 9 ರಂದು ಬನ್ನೂರಿನ ಗುರುಂಪುನಾರು ನಿವಾಸಿ ಶೇಖ್ ರಝಾಕ್ ಸಾಹೇಬ್ ಅವರ ಪತ್ನಿಯ ಮಾವನ ಮನೆಯಲ್ಲಿ ,ಅವರ ಪುತ್ರಿ ಮಮ್ತಾಜ್ ಎಂಬವರ ವಿವಾಹದ ತಕರಾರಿನ ವಿಚಾರವಾಗಿ ಶೇಖ್ ರಝಾಕ್ ಸಾಹೇಬ್ ಅವರನ್ನು ರಾಜಿ ಪಂಚಾಯಿತಿ ಮಾತುಕತೆಗೆ ಕರೆಯಲಾಗಿತ್ತು. ಪಂಚಾಯಿತಿ ನಡೆಯುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಅಲ್ಲಿದ್ದ ರಝಾಕ್, ಫಕೀರ್ ಸಾಹೇಬ್, ಬೇಟಾ, ಹುಸೈನ್, ಹಸನ್ ಸಾಹೇಬ್, ಹಿದಾಯಿತ್,ಅಬ್ದುಲ್ ಖಾದರ್ ಮತ್ತು ಮಹಮ್ಮದ್ ಸಿಗ್ಬತ್ ಎಂಬವರು ಸೇರಿಕೊಂಡು ಶೇಖ್ ರಝಾಕ್ ಸಾಹೇಬ್ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪವಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಮಹಮ್ಮದ್ ಸಿಗ್ಬತ್ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ. ಆರೋಪಿಯನ್ನು ಬಂದಿಸಿರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.