ಅಡ್ಡೂರು: ಪಿಎಫ್ ಐ ನಿಂದ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮ
ಅಡ್ಡೂರು,ಸೆ.24: ದೇಶದಲ್ಲಿ ಎಲ್ಲಿವರೆಗೆ ಪ್ರತಿಪಕ್ಷಗಳು ಇರುವುದಿಲ್ಲವೋ, ಅಲ್ಲಿವರೆಗೆ ಪ್ರಜಾಪ್ರಭುತ್ವಕ್ಕೆ ಉಳಿವಿಲ್ಲ ಎಂದು ಪಿಎಫ್ ಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಡ್ಡೂರು ಘಟಕದ ವತಿಯಿಂದ ಇಲ್ಲಿನ ರೈಫಲ್ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2014ರಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮುನ್ನ ದೇಶದ ಜನತೆಗೆ ಭರವಸೆಗಳ ಮಹಾಪೂರ ನೀಡಿತ್ತು. ಆದರೆ ಇದೀಗ 4 ವರ್ಷಗಳು ಕಳೆದರು ತನ್ನ ಆಡಳಿತಾವಧಿಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಅಭಿವೃದ್ಧಿ ಬದಲಾಗಿ ಜೆಎಸ್ ಟಿ, ತೈಲ-ಅನಿಲ ಬೆಲೆ ಏರಿಸಿ ಜನರ ಜೀವನವನ್ನು ದುರ್ಬಲಗೊಳಿಸುತ್ತಿದೆ ಎಂದರು.
ಈ ವೇಳೆ ಪಿಎಫ್ ಐ ಬಗ್ಗೆ ಕಿರು ಚಿತ್ರವೊಂದನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಯೂಸುಫ್ ಮುಸ್ಲಿಯರ್ ಅಡ್ಡೂರು ದುವಾಶೀರ್ವಚನ ನೀಡುವ ಮೂಲಕ ಉದ್ಘಾಟಿಸಿದರು. ಎಸ್ ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಅಧ್ಯಕ್ಷ ಅಬೂಬಕ್ಕರ್ ಪುತ್ತ ವಾಮಂಜೂರು ಪ್ರಸ್ತಾವಿಕ ಮಾತನಾಡಿದರು. ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ.ಸಯ್ಯದ್ ತೋಕುರ್, ಗೌರವಾಧ್ಯಕ್ಷ ಎ.ಎಸ್. ಬಾವುಂಞಿ, ಆಯಿಶಾ ಮಸ್ಜಿದ್ ಅಧ್ಯಕ್ಷ ಶಾಫೀ ಕೊಯ್ಯಾರ್, ಕಾಂಜಿಲಕೋಡಿ ಬದ್ರುಲ್ ಹುದಾ ಮಸೀದಿಯ ಗೌರವಧ್ಯಕ್ಷ ಎಂ.ಎಚ್. ಮುಯ್ಯುದ್ದೀನ್, ಉಪಾಧ್ಯಕ್ಷ ಎ.ಕೆ ರಿಯಾಝ್, ಗಲ್ಫ್ ಸೆಂಟ್ರಲ್ ಕಮಿಟಿ ಸಲಹೆಗಾರ ಅಬ್ದುಲ್ ರೆಹಮಾನ್ ಬಂಡಸಾಲೆ ಹಾಗೂ ಎಸ್ ಡಿಪಿಐ ಅಡ್ಡೂರು ವಲಯ ಸಮಿತಿ ಅಧ್ಯಕ್ಷ ಝೈನುದ್ದೀನ್ ಪಾಂಡೇಲ್ ಮತ್ತಿತರರು ಉಪಸ್ಥಿತರಿದ್ದರು.
ಶೇರಿಫ್ ಅಡ್ಡೂರು ಸ್ವಾಗತಿಸಿ, ಶಫೀಕ್ ಅಡ್ಡೂರು ವಂದಿಸಿದರು.