ಕಾರ್ಕಳ: ಬುದ್ದಿಮಾಂದ್ಯ ಯುವತಿಯ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಜೈಲುಶಿಕ್ಷೆ
ಉಡುಪಿ, ಸೆ.25: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಬುದ್ದಿಮಾಂದ್ಯ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಂದು 10ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾರ್ಕಳ ತಾಲೂಕು ಕಲ್ಯ ಗ್ರಾಮದ ಕುಂದ್ರಬೆಟ್ಟು ನಿವಾಸಿ ಗಣೇಶ್ ಪೂಜಾರಿ ಯಾನೆ ಅಣ್ಣು(34) ಶಿಕ್ಷೆಗೆ ಗುರಿಯಾದ ಆರೋಪಿ. 2016ರ ಜು.14ರಂದು ಗಣೇಶ್ ಪೂಜಾರಿ, ಮನೆಯಲ್ಲಿ ಒಬ್ಬಳೇ ಇದ್ದ 18 ವರ್ಷ ವಯಸ್ಸಿನ ಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ್ದನು. ಈ ವಿಚಾರ ಮನೆಯವರಿಗೆ ತಿಳಿಸದಂತೆ ಜೀವಬೆದರಿಕೆಯೊಡ್ಡಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 376, 506ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ನಡೆಸಿದ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಆರೋಪಿಯನ್ನು 2016ರ ಜು.15ರಂದು ಬಂಧಿಸಿ, ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 27 ಸಾಕ್ಷಿಗಳ ಪೈಕಿ 21ಸಾಕ್ಷಿದಾರರ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸಿ.ವೆಂಕಟೇಶ್ ನಾಯ್ಕ್, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಯನ್ನು ದೋಷಿ ಎಂಬುದಾಗಿ ಸೆ.24ರಂದು ಘೋಷಿಸಿ ಶಿಕ್ಷೆಯ ಪ್ರಮಾಣವನ್ನು ಸೆ.25ರಂದು ಪ್ರಕಟಿಸುವುದಾಗಿ ತಿಳಿಸಿದ್ದರು.
ಅದರಂತೆ ಇಂದು ಆರೋಪಿಗೆ 10ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದರು. ನೊಂದ ಯುವತಿಗೆ ಪರಿಹಾರವಾಗಿ 25ಸಾವಿರ ರೂ. ನೀಡುವಂತೆ ಈ ಆದೇಶದಲ್ಲಿ ತಿಳಿಸಲಾಗಿದೆ. ಬಂಧನಕ್ಕೆ ಒಳಗಾದ ನಂತರ ಆರೋಪಿ ಜಾಮೀನು ಸಿಗದೆ ಜೈಲಿನಲ್ಲೇ ಇದ್ದಾನೆ. ಅಭಿಯೋಜನೆ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದ್ದರು.