ಸೌಹಾರ್ದತೆಯೊಂದಿಗೆ ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ‘ಬಂಧುತ್ವ’ ಕಾರ್ಯಕ್ರಮ : ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನಾ
ಮಂಗಳೂರು, ಸೆ.25: ಸೌಹಾರ್ದತೆಯೊಂದಿಗೆ ನಗರವನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ‘ಬಂಧುತ್ವ’ವನ್ನು ಎಲ್ಲಾ ಧರ್ಮ,ಜಾತಿ,ಮತ ,ಪಂಗಡಗಳ ಜನರು ಜೊತೆ ಸೇರಿ ಇನ್ನಷ್ಟು ಭದ್ರಪಡಿಸಬೇಕಾಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಅತೀ.ವಂ.ಡಾ.ಪೀಟರ್ ಪೌಲ್ ಸಲ್ದಾನಾ ತಿಳಿಸಿದ್ದಾರೆ.
ನಗರದ ಬಿಷಪ್ ಹೌಸ್ನಲ್ಲಿ ಈ ಹಿನ್ನೆಲೆಯಲ್ಲಿ ಸೆ.24ರಂದು ವಿವಿಧ ಧರ್ಮಗಳ ಹಾಗೂ ಸಂಸ್ಥೆಗಳ ಮುಖಂಡರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದಲ್ಲಿ 124 ಚರ್ಚ್ಗಳು ಹಾಗೂ ಇತರ ಶಿಕ್ಷಣ,ವೈದ್ಯಕೀಯ ಹಾಗೂ ಸಾಮಾಜಿಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಸಂಸ್ಥೆಗಳು ವಿವಿಧ ಹಂತದಲ್ಲಿ ಸೇವಾ ಕಾರ್ಯವನ್ನು ನಿರ್ವಹಿಸುತ್ತಿವೆ, ಸೌರ್ಹಾದತೆಗೆ ಕೊಡುಗೆ ನೀಡುತ್ತಿವೆ. ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡುವ ಹಂತದಲ್ಲಿ ಮಾಹಿತಿ, ಸಂಪರ್ಕ ಹಾಗೂ ತಾಂತ್ರಿಕತೆಯಲ್ಲಿ ಅಭಿವೃದ್ಧಿ ಸಾಧಿಸುವುದಲ್ಲದೆ ನಗರದ ಜನರಿಗೆ ನೀಡುತ್ತಿರುವ ಸೌಕರ್ಯಗಳ ಗುಣಮಟ್ಟದಲ್ಲಿ ಅಭಿವೃದ್ಧಿಯಾಗಬೇಕಾಗಿದೆ. ಸಂಪತ್ತಿನ ಬಳಕೆಯನ್ನು ಮಿತವಾಗಿ ಬಳಸುವಂತಾಗಬೇಕು. ಮುಖ್ಯವಾಗಿ ಜನರ ನಡುವೆ ಪರಸ್ಪರ ಸೌಹಾರ್ದತೆಯ ವಾತವರಣ ಗಟ್ಟಿಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬೆಂಬಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾ, ಶಾಸಕ ವೇದವ್ಯಾಸ್ ಕಾಮತ್, ಡಾ.ಭರತ್ ಹೆಗ್ಡೆ, ಭೋಜೇಗೌಡ, ಸಂಜೀವ ಮಠಂದೂರು, ವಾಲ್ಟರ್ ನಂದಳಿಕೆ, ಕ್ಯಾ.ಬ್ರಿಜೇಶ್ ಚೌಟ, ಸುಶೀಲ್ ನರೋನ್ಹಾ, ಅಕ್ಷಿತ್ ಶೆಟ್ಟಿ, ಮನಪಾ ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಸಚಿವ ರಮಾನಾಥ ರೈ, ಅಮರನಾಥ ಶೆಟ್ಟಿ, ಅಭಯ ಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗಣೇಶ್ ಕಾರ್ನಿಕ್, ಮೊಯ್ದಿನ್ ಬಾವ, ಜೆ.ಅರ್.ಲೋಬೊ, ವಂ.ವಿಕ್ಟರ್ ವಿಜಯ್ ಲೋಬೊ, ಎಂ.ಪಿ.ನರೋನ್ಹಾ, ಜೋನ್ ಡಿ ಸಿಲ್ವ, ಬಸ್ತಿ ವಾಮನ ಶೆಣೈ, ರಾಯ್ ಕ್ಯಾಸ್ಟಲಿನೋ, ವಿನಯ ಹೆಗ್ಡೆ, ಕದ್ರಿ, ಕುದ್ರೋಳಿ, ಮಂಗಳಾದೇವಿ ದೇವಸ್ಥಾನಗಳ ಟ್ರಸ್ಟಿಗಳು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.