ಧೂಮಪಾನ ಮಾರಾಟಕ್ಕಿನ್ನು ವಿಶೇಷ ಪರವಾನಿಗೆ: ಸಚಿವ ಖಾದರ್
'ನಗರಾಭಿವೃದ್ಧಿ ಸಚಿವಾಲಯದಿಂದ ವಿಶೇಷ ಕ್ರಮಕ್ಕೆ ಚಿಂತನೆ'
ಮಂಗಳೂರು, ಸೆ. 26: ಶಾಲಾ ಕಾಲೇಜುಗಳ ವಿದ್ಯಾರ್ಥಿ ಸೇರಿದಂತೆ ಯುವಜನರಲ್ಲಿ ಧೂಮಪಾನದ (ಸಿಗರೇಟ್)ಮೂಲಕ ಮಾದಕ ವಸ್ತುಗಳ ಸೇವನೆಯನ್ನು ತಡೆಯುವ ನಿಟ್ಟಿನಲ್ಲಿ ಈ ವಸ್ತುಗಳ ಮಾರಾಟ ಮಾಡುವವರು ಸ್ಥಳೀಯಾಡಳಿತದಿಂದ ವಿಶೇಷ ಪರವಾನಿಗೆಯನ್ನು ಪಡೆಯುವ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಮತ್ತು ವತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ನ 2018-19ನೆ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಾದಕ ದ್ರವ್ಯಗಳ ಹಾವಳಿ ಕುರಿತಂತೆ ಈ ವಿಷಯ ಪ್ರಸ್ತಾಪಿಸಿದರು.
ಶಾಲಾ ಕಾಲೇಜುಗಳ ಬದಿ ಗೂಡಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತಂತೆ ಹಿಂದಿನ ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರು ಪ್ರಸ್ತಾಪಿಸಿದ ವಿಷಯದ ಕುರಿತಂತೆ ಕೈಗೊಳ್ಳಲಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಶಾಲಾ ಕಾಲೇಜು ಪಕ್ಕದಲ್ಲಿಯೇ ಮಕ್ಕಳಿಗೆ ಬೀಡಿ ಸಿಗರೇಟಿನಂತಹ ವಸ್ತುಗಳು ಲಭ್ಯವಾಗುತ್ತಿವೆ. ಈ ಮೂಲಕವೂ ಮಾದಕ ದ್ರವ್ಯಗಳ ಸೇವೆನೆಯಾಗುತ್ತಿದೆ. ಇದನ್ನು ತಡೆಗಟ್ಟಲು ಮಾರಾಟಕ್ಕೆ ಕಡಿವಾಣ ಹಾಕಬೇಕಾಗಿದೆ. ಅದಕ್ಕಾಗಿ ನಗರಾಭಿವೃದ್ಧಿ ಇಲಾಖೆಯು, ಧೂಮಪಾನ ವಸ್ತುಗಳ ಮಾರಾಟ ಮಾಡಲು ಸಂಬಂಧಪಟ್ಟ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ವಿಶೇಷ ಪರವಾನಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗುವುದು. ಈ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮಾತನಾಡಿ, ಈಗಾಗಲೇ ಮಾದಕ ದ್ರವ್ಯಗಳ ದುಷ್ಪರಿಣಾಮದ ಕುರಿತಂತೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಮಾದಕ ದ್ರವ್ಯವಾಗಿ ಸಿಂಥೆಟಿಕ್ ಸಿರಪ್ಗಳನ್ನು ಬಳಕೆ ಮಾಡಲಾಗುತ್ತಿದೆ. ವೈದ್ಯರ ಅನುಮತಿ ಪತ್ರ ಇಲ್ಲದೆ ಇಂತಹ ಸಿರಪ್ಗಳು ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಮಾದಕ ದ್ರವ್ಯಗಳ ಕುರಿತಂತೆ ಜಾಗೃತಿ ಮೂಡಿಸಲು ಶಾಲಾ ಕಾಲಜುಗಳಲ್ಲಿ ಸಮಿತಿಯನ್ನು ರಚಿಸಬೇಕಾಗಿದ್ದು, ಅದು ಆರಂಭಗೊಂಡಿಲ್ಲ ಎಂದು ಹೇಳಿದರು.
ಪ್ರತಿ ತಾಲೂಕಿನಲ್ಲಿ ಜನಸ್ಪಂದನ ಸಭೆ
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಈ ಬಾರಿ ಮೇ ತಿಂಗಳಿನಿಂದ ಮಳೆಯಿಂದ ಆಗಿರುವ ವಿಪತ್ತಿಗೆ ಸಂಬಂಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಶಕ್ತಿ ಮೀರಿ ಶ್ರಮಿಸಿದೆ. ಇದರಿಂದ ಸಾಕಷ್ಟು ಅನುಭವಗಳನ್ನು ಜಿಲ್ಲಾಡಳಿತ ಪಡೆದಿದೆ. ಇದೀಗ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಜನರ ಸಮಸ್ಯೆಗಳನ್ನು ಆಲಿಸಲು ಜನಸ್ಪಂದನ ಕಾರ್ಯಕ್ರಮವನ್ನು ನಡೆಸಿ ಅಲ್ಲೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ತಾಲೂಕು ಮಟ್ಟದಲ್ಲೂ ಕೆಡಿಪಿ ಸಭೆ
ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವ ಕೆಡಿಪಿ ಸಭೆಯನ್ನು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ನಡೆಸಿ ಅಲ್ಲಿಯೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ವೆನ್ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತಾದ ಪ್ರಗತಿ ಪರಿಶೀಲನೆಯ ಸಂದರ್ಭ ಸಚಿವ ಖಾದರ್ರವರು, ಆರೋಗ್ಯ ಇಲಾಖೆಯ ಮೂಲಸೌಕರ್ಯದ ಕುರಿತಂತೆ ಮುಂದಿನ ವಾರ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.
ಮಂಗಳೂರು ಬಳಿಕ ಇತರ ತಾಲೂಕಿನಲ್ಲಿ ಯುಪಿಒಆರ್ ಕಾರ್ಡ್
ಸಭೆಯಲ್ಲಿ 94ಸಿಸಿಯಡಿ ಆರ್ಟಿಸಿ ವಿತರಣೆಯಲ್ಲಿ ವಿಳಂಬ ಹಾಗೂ ಲೋಪವಾಗುತ್ತಿರುವ ಬಗ್ಗೆ ಸಚಿವ ಖಾದರ್ ಅಧಿಕಾರಿಗಳ ಗಮನ ಸೆಳೆದರು. ಗ್ರಾಮದ ಪ್ರದೇಶವೊಂದರಲ್ಲಿ ಆರ್ಟಿಸಿ ನೀಡುವಾಗ ಕೆಲವೊಂದು ನಿವೇಶನಗಳನ್ನು ಕೈಬಿಟ್ಟಿರುವ ಬಗ್ಗೆ ದೂರು ಇದೆ. ಗ್ರಾಮ ಕರಣಿಕರು ಒಂದು ಗ್ರಾಮದಲ್ಲಿ ಆರ್ಟಿಸಿ ನೀಡಲು ಆರಂಭಿಸಿದಾಗ ಪೂರ್ಣವಾಗಿ ಎಲ್ಲಾ ನಿವೇಶನದಾರರನ್ನೂ ಪರಿಗಣಿಸಿ ಆರ್ಟಿಸಿ ಹಂಚಿಕೆ ಮಾಡಬೇಕು ಎಂದು ಸೂಚಿಸಿದರು.
ಒಂದು ವೇಳೆ ಬಿಟ್ಟು ಹೋದ ಪ್ರಕರಣಗಳಿದಲ್ಲಿ ಆ ಬಗ್ಗೆ ಸಹಾಯಕ ಆಯುಕ್ತರ ಗಮನಕ್ಕೆ ತಂದಲ್ಲಿ ತನಿಖೆ ಮಾಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿ ಖಾದರ್ ಯು.ಟಿ.ಖಾದರ್ ತಿಳಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಕಂದಾಯ ಇಲಾಖೆಯಲ್ಲಿ ಭೂಪರಿವರ್ತನೆಯಲ್ಲಿ ಸಮಸ್ಯೆ ಆಗಿತ್ತು. ಇದೀಗ ನಗರ ಪ್ರದೇಶದಲ್ಲಿ ಯುಪಿಒಆರ್ ಕಾರ್ಡ್ ನೀಡುವ ಮೂಲಕ ಆಸ್ತಿಯ ಮಾಲಕತ್ವವನ್ನು ಗುರುತಿಸುವುದನ್ನು ಸರಳಗೊಳಿಸಲಾಗಿದೆ. ಮಂಗಳೂರು ತಾಲೂಕಿನ ನಗರ ಪ್ರದೇಶದಲ್ಲಿ ಪ್ರಥಮ ಆದ್ಯತೆಯ ಮೇರೆಗೆ ಆಯ್ದುಕೊಂಡು ಯುಪಿಒಆರ್ ಕಾರ್ಡ್ ವಿತರಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಪುತ್ತೂರು ಸೇರಿದಂತೆ ಜಿಲ್ಲೆಯ ಇತರ ತಾಲೂಕಿನ ನಗರಸಭೆ ವ್ಯಾಪ್ತಿಯಲ್ಲಿ ಇದನ್ನು ವಿಸ್ತರಿಸಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಾಸಕ ರಾಜೇಶ್ ನಾಯ್ಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಯು.ಪಿ. ಮುಹಮ್ಮದ್, ಜನಾರ್ದನ ಗೌಡ, ಅನಿತಾ ಹೇಮನಾಥ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.
ಸರಕಾರಿ ಕೆಲಸಗಳಲ್ಲಿ ವಿಳಂಬ ಬೇಡ: ಅಧಿಕಾರಿಗಳಿಗೆ ಕಿವಿಮಾತು
ಸರಕಾರಿ ನೌಕರರು ಜನಪ್ರತಿನಿಧಿಗಳ ಜತೆಯಾಗಿ ಕೆಲಸ ಮಾಡಿದಾಗ ಮಾತ್ರವೇ ಅಭಿವೃದ್ಧಿಯಲ್ಲಿ ಸಮನ್ವಯತೆಯನ್ನು ಕಾಯ್ದುಕೊಳ್ಳಲು ಸಾಧ್ಯ. ಸರಕಾರಿ ನೌಕರರು ಜತೆಯಾಗಿ ಕೆಲಸ ಮಾಡಿ ಸೂಕ್ತ ಸಮಯದಲ್ಲಿ ಜನರಿಗೆ ಸೌಲಭ್ಯಗಳನ್ನು ತಲುಪಿಸಬೇಕು. ವಿಳಂಬ ಧೋರಣೆ ಅನುಸರಿಸರದೆ, ನ್ಯಾಯಬದ್ಧವಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಉತ್ತಮವಾಗಿ ಕೆಲಸ ಮಾಡುವವರಿಗೆ ಬೆಂಬಲ ನೀಡಲಾಗುವುದು. ಜನರಿಗೆ ನೆಮ್ಮದಿಯ ಸೇವೆ ಸಿಗದಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ತಮ್ಮ ಪ್ರಥಮ ಕೆಡಿಪಿ ಸಭೆಯಲಿ್ಲ ಅಧಿಕಾರಿಗಳಿಗೆ ಕಿವಿಮಾತು ನೀಡಿದರು.
ಪಶ್ಚಿಮ ವಾಹಿನಿ ಯೋಜನೆ ಬಗ್ಗೆ ತಜ್ಞರಿಂದ ಪರಿಣಾಮ ಅಧ್ಯಯನ
ಪಶ್ಚಿಮ ವಾಹಿನಿ ಯೋಜನೆಯ ರೂಪುರೇಷೆಗಳ ಕುರಿತಂತೆ ಮಾಹಿತಿಯನ್ನು ಒದಗಿಸುವಂತೆ ಸಭೆಯಲ್ಲಿ ನಾಮನಿರ್ದೇಶಿ ಸದಸ್ಯರೊಬ್ಬರು ಒತ್ತಾಯಿಸಿದರು.
ಯೋಜನೆಗೆ ಸಂಬಂಧಿಸಿ 265 ಲಕ್ಷ ರೂ.ಗಳ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. 10 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಳವೂರು ಅಣೆಕಟ್ಟು ನಿರ್ಮಾಣದಿಂದಾಗಿ ಈಗಾಗಲೇ ಮಳೆಗಾಲದಲ್ಲಿ ಸಾಕಷ್ಟು ಅವಾಂತರವಾಗಿದೆ. ಜನಜೀವನಕ್ಕೆ ತೊಂದರೆಯಾಗಿದೆ. ಹಾಗಾಗಿ ಪಶ್ಚಿಮ ವಾಹಿನಿ ಯೋಜನೆಯಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸಂಬಂಧಿಸಿ ತಜ್ಞರ ಸಮಿತಿ ಮಾಡಿ ಪರಿಣಾಮ ಅಧ್ಯಯನ ನಡೆಸುವುು ಸೂಕ್ತ ಎಂದು ಸಲಹೆ ನೀಡಿದರು.
ಅಕ್ಟೋಬರ್ 11ರಂದು ಲೇಡಿಗೋಶನ್ ನೂತನ ಕಟ್ಟಡ ಉದ್ಘಾಟನೆ
ಬಹು ನೀರೀಕ್ಷಿತ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ ಎಂದು ಸಭೆಯಲ್ಲಿ ಅಧಿಕಾರಿ ಮಾಹಿತಿ ನೀಡಿದಾಗ, ಅಕ್ಟೋಬರ್ 11ರಂದು ಉದ್ಘಾಟನೆಗೆ ದಿನ ನಿಗದಿಪಡಿಸುವಂತೆ ಸಚಿವ ಖಾದರ್ ತಿಳಿಸಿದರು.
ಪಡಿತರ ಪಡೆಯಲು ಬಯೋಮೆಟ್ರಿಕ್ ಸಮಸ್ಯೆ ಆಗದು
ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯಲು ಬಯೋಮೆಟ್ರಿಕ್ ಬೆರಳಚ್ಚು ಸಮಸ್ಯೆ ಆಗದು. ಪ್ರತಿ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಶೇ. 2ರಷ್ಟು ಮಂದಿಗೆ ಬಯೋಮೆಟ್ರಿಕ್ ಬೆರಳಚ್ಚು ಇಲ್ಲದೆಯೂ ಅಂಗಡಿಯವರು ಪಡಿತರ ಒದಗಿಸಲು ಅವಕಾಶವಿದೆ. ಶೇ. 2ಕ್ಕಿಂತ ಅಧಿಕ ಮಂದಿಯ ಬಯೋಮೆಟ್ರಿಕ್ ಸಮಸ್ಯೆ ಆದಲ್ಲಿ ತಾಲೂಕು ಮಟ್ಟದಿಂದ ಅನುಮತಿ ಪಡೆದು ಪಡಿತರ ಒದಗಿಸಲು ಅವಕಾಶವಿದೆ. ಪಡಿತರ ಅಂಗಡಿಯೊಂದರಲ್ಲಿ 500 ಮಂದಿ ಪಡಿತರ ಚೀಟಿದಾರಲ್ಲಿ ಬೆರಳೆಣಿಕೆ ಮಂದಿಯದ್ದು ಮಾತ್ರವೇ ಬೆರಳಚ್ಚು ತಾಳೆಯಾಗದೆ ಹೋಗಬಹುದು. ಅದಕ್ಕಾಗಿ ಪಡಿತರ ನಿರಾಕರಿಸುವಂತಿಲ್ಲ. ಸರಕಾರದ ನಿಯಮದ ಪ್ರಕಾರವೇ ಅಂತಹ ಸಂದರ್ಭದಲ್ಲಿ ಪಡಿತರ ವಿತರಿಸಲು ಅಂಗಡಿಯವರಿಗೆ ಅವಕಾಶವಿದೆ ಎಂದು ಸಚಿವ ಖಾದರ್ ಪಡಿತರದ ಬೆರಳಚ್ಚು ಕುರಿತಾದ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.