ಕಲ್ಲಡ್ಕ: ಸೆ. 28ರಿಂದ ರಾಷ್ಟ್ರಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ
ಬಂಟ್ವಾಳ, ಸೆ. 27: ವಿದ್ಯಾಭಾರತಿ ಅಖಿಲಭಾರತ ಶಿಕ್ಷಾ ಸಂಸ್ಥಾನ್ ಕರ್ನಾಟಕ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಸೆ. 28, 29ರಂದು ವಿದ್ಯಾಭಾರತಿ ಸಂಸ್ಥಾನದ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವಿಭಾಗದ ರಾಷ್ಟ್ರ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಮಂಗಳೂರು ವಿಶ್ವವಿದ್ಯಾನಿಲಯದ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಗುರುವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಕಲ್ಲಡ್ಕ ಹನುಮಾನ್ ನಗರದ ಭಾರತರತ್ನ ಅಟಲ್ ಬಿಹಾರ್ ವಾಜಪೇಯಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕಿಶೋರ್ ಕುಮಾರ್ ಅವರು ಪಂದ್ಯಾಟವನ್ನು ಉದ್ಘಾಟಿಸುವರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಿಲಾಸ್ ಪುರ್ ಸರಸ್ವತಿ ಉಪಾಧ್ಯಕ್ಷ ಸಂತೋಷ್ ತಿವಾರಿ, ಕರ್ನಾಟಕ ವಿದ್ಯಾವರ್ಧಕ ಅಧ್ಯಕ್ಷ ಸುಂದರ್ ರಾಂ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಅಂದು ಸಂಜೆ 6:30ಕ್ಕೆ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸೆ.29ರಂದು ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ದೇಶದ 29 ರಾಜ್ಯಗಳ ಒಟ್ಟು 11 ಕ್ಷೇತ್ರಗಳಿಂದ ಸುಮಾರು 300 ಕ್ರೀಡಾಪಟುಗಳು ಪಂದ್ಯದಲ್ಲಿ ಭಾಗವಹಿಸುವರು. ಬಾಲ, ಕಿಶೋರ, ತರುಣ ವರ್ಗಗಳಲ್ಲಿ ಪ್ರತ್ಯೇಕವಾಗಿ ಬಾಲಕ-ಬಾಲಕಿಯರಿಗೆ ಸ್ಪರ್ಧೆ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತರ ಭಾರತ ಶೈಲಿಯ ಉಟೋಪಚಾರ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಕೆ.ಸತ್ಯನಾರಾಯಣ, ವಸಂತ ಮಾಧವ, ಆನಂದ್ ರಮೇಶ್, ವಸಂತ ಉಪಸ್ಥಿತರಿದ್ದರು.