ಬಂಟ್ವಾಳ: ಕಿಡ್ನಿ ವೈಫಲ್ಯದಿಂದ ತೊಂದರೆಗೊಳಗಾದ ಯುವಕನ ಆರ್ಥಿಕ ಸಹಾಯಕ್ಕೆ ಮೊರೆ
ಬಂಟ್ವಾಳ, ಸೆ. 27: ತನ್ನ ಎರಡೂ ಕಿಡ್ನಿ ವೈಫಲ್ಯದಿಂದ ಹಲವು ತೊಂದರೆಗಳನ್ನು ಅನುಭವಿಸುತ್ತಿರುವ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಬೊಳ್ಳಾಯಿ ಜಾಡಕೋಡಿಯ ನಿವಾಸಿ ಹಂಝ ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಆರ್ಥಿಕವಾಗಿ ನೆರವಾಗುವಂತೆ ಹಂಝ ಅವರ ಕುಟುಂಬವು ಉದಾರ ದಾನಿಗಳ ಮೊರೆ ಹೋಗಿದೆ.
ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಬೊಳ್ಳಾಯಿ ಜಾಡಕೋಡಿನಲ್ಲಿ ವಾಸವಾಗಿರುವ ಪಿ.ಬಿ.ಮುಹಮ್ಮದ್ ಹಾಗೂ ಮೈಮುನಾ ದಂಪತಿಯ ಐವರು ಮಕ್ಕಳಲ್ಲಿ ಹಂಝ (19) ಹಿರಿಯವನು. ಆರು ತಿಂಗಳ ಮಗುವಾಗಿರುವಾಗಲೇ ಮೂತ್ರ ಕೋಶದ ಸಮಸ್ಯೆಯಿಂದಾಗಿ ಮೂತ್ರ ಬ್ಲಾಕ್ ಆಗಿ ಸರ್ಜರಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಯಿತು. ಸಣ್ಣ ಮಗುವಾಗಿರುವಾಗಲೇ ಟ್ಯೂಬ್ ಮೂಲಕ ಮೂತ್ರ ಮಾಡುವಂತಹ ಸರ್ಜರಿಗೆ ಒಳಗಾದ ಹಂಝ, ಅಂದಿನಿಂದ ಇಂದಿನವರೆಗೂ ಟ್ಯೂಬ್ ಮೂಲಕವೇ ಮೂತ್ರ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕೃತಕವಾಗಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಹಂಝನಿಗೆ 2014ರಲ್ಲಿ ಪ್ರಥಮ ಬಾರಿಗೆ ಕಿಡ್ನಿ ಸಮಸ್ಯೆ ಉಂಟಾಯಿತು. ಅಂದಿನಿಂದ ಪ್ರತೀ ತಿಂಗಳಿಗೊಮ್ಮೆ ಚಿಕಿತ್ಸೆಗಾಗಿ ಹಂಝನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಒಂದು ಸಲ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿ ಬರುವಾಗ ತಂದೆ ದುಡಿದ ಹಣವೆಲ್ಲವೂ ಅದಕ್ಕೇ ಸರಿಯಾಗುತ್ತಿತ್ತು. ಆರ್ಥಿಕವಾಗಿ ತೀರಾ ಹಿಂದುಳಿದ ಆತನ ತಂದೆಗೆ ತಾನು ದಿನಂಪ್ರತೀ ಮೈಮುರಿದು ದುಡಿದರೂ ಮಗನ ಚಿಕಿತ್ಸೆಗೆ ಹಣ ಹೊಂದಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಂಝರ ತಂದೆ ಮುಹಮ್ಮದ್ ಅವರು ಸಜಿಪಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಕೆಲಸದಲ್ಲಿದ್ದು, ಅದರಿಂದ ಬರುವ ಸಂಬಳದಲ್ಲಿ ಮನೆಯ ಖರ್ಚಿಗೇ ಸರಿ ಹೊಂದುತ್ತಿರಲಿಲ್ಲ. ಅಲ್ಲದೆ, ಮಗನ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಹಂಝ ಅವರ ಚಿಕಿತ್ಸೆಯು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಶೀಘ್ರ ಗುಣಮುಖನಾಗಿ ಕುಟುಂಬಕ್ಕೆ ಆಸರೆಯಾಬೇಕಾದ ಹಂಝನ ಕುಟುಂಬವು ಉದಾರ ದಾನಿಗಳ ಮೊರೆ ಹೋಗಿದೆ. ಚಿಕಿತ್ಸೆಗಾಗಿ ಸಹಾಯ ಮಾಡಲು ಬಯಸುವವರು ಹಂಝ ಅವರ ತಂದೆ ಮುಹಮ್ಮದ್ ಅವರನ್ನು 9611004451 ಅನ್ನು ಸಂಪರ್ಕಿಸಬಹುದಾಗಿದೆ.