ಯುವತಿಗೆ ಮಾನಸಿಕ ಕಿರುಕುಳ, ಕುಟುಂಬಕ್ಕೆ ಜೀವ ಬೆದರಿಕೆ: ದೂರು
ಪುತ್ತೂರು, ಸೆ. 27: ಯುವಕನೊಬ್ಬ ತಾನು ಕೆಲಸ ಮಾಡುತ್ತಿರುವ ಸಂಸ್ಥೆಗೆ ನನ್ನ ವಿವಿಧ ಚಿತ್ರಗಳನ್ನು ಕಳುಹಿಸಿ, ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ್ದಲ್ಲದೆ ತನ್ನ ತಂದೆಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆ. ನನಗೆ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಯುವತಿಯೊಬ್ಬರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ರೈಲ್ವೇ ಕ್ರಾಸ್ ಬಳಿಯ ನಿವಾಸಿ ಶಶಿಧರ್ ಕೆ.ಎಸ್ ಎಂಬವರ ಪುತ್ರಿ ಈ ದೂರು ನೀಡಿದ್ದ ಯುವತಿ. ಕೊಡಗು ಜಿಲ್ಲೆಯ ಪೊನ್ನಂಪೇಟೆ ಜ್ಯೂನಿಯರ್ ಕಾಲೇಜು ಬಳಿಯ ಐಬಿ ರಸ್ತೆಯ ಲೋಕೋಪಯೋಗಿ ಇಲಾಖೆಯ ಕ್ವಾಟ್ರಸ್ ನಿವಾಸಿ ಭರತ್ ಆರ್.ಬಾರಿತ್ತಾಯ ಎಂಬಾತನ ವಿರುದ್ಧ ದೂರು ನೀಡಿದ್ದಾರೆ.
ಜು.1ರಂದು ಆರೋಪಿ ಭರತ್ ಬಾರಿತ್ತಾಯ ತಮ್ಮ ಮನೆಯಿಂದ ಚಿನ್ನಾಭರಣ ಕಳವು ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದೀಗ ದೂರು ನೀಡಿದ ಕಾರಣಕ್ಕೆ ಭರತ್ ತನಗೆ ಮೆಸೇಜ್ ಮಾಡಿ ಪೊಲೀಸರಿಗೆ ದೂರು ಕೊಟ್ಟದ್ದು ಯಾಕೆ ? ನಿನ್ನ ಮತ್ತು ನಿನ್ನ ಕುಟುಂಬದ ಮಾನ ಹರಾಜು ಮಾಡುತ್ತೇನೆ. ನಿನ್ನ ಕೈಕಾಲು ಮುರಿದು ಹಾಕುತ್ತೇನೆ ಎಂದು ತಿಳಿಸಿದ್ದಾನೆ ಎಂದು ಚೈತ್ಯ ಕೆ.ಎಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.