ಜನವರಿಗೆ ಗಂಗಾನದಿ ಶೇ.80ರಷ್ಟು ಶುದ್ಧಿ: ಸಚಿವ ಸತ್ಯಪಾಲ್ ಸಿಂಗ್
ಮಣಿಪಾಲ, ಸೆ. 27: ಗಂಗಾ ನದಿಯ ಶುದ್ಧೀಕರಣದ ಕುರಿತಂತೆ ಉತ್ತರ ಪ್ರದೇಶ ಹಾಗೂ ಉತ್ತರಖಂಡ ರಾಜ್ಯಗಳ ಮುಖ್ಯಮಂತ್ರಿಗಳು ಸಂಪೂರ್ಣ ಬೆಂಬಲವನ್ನು ನೀಡುತಿದ್ದು, ಮುಂದಿನ ಜನವರಿ ತಿಂಗಳ ಸುಮಾರಿಗೆ ಶೇ.70ರಿಂದ 80ರಷ್ಟು ಗಂಗಾ ಶುದ್ಧಗೊಳ್ಳುವ ವಿಶ್ವಾಸವಿದೆ ಎಂದು ಕೇಂದ್ರ ಕೇಂದ್ರ ಮಾನವ ಸಂಪನ್ಮೂಲ, ಜಲ ಸಂಪನ್ಮೂಲ ಹಾಗೂ ಗಂಗಾನದಿ ಅಭಿವೃದ್ಧಿ ಸಚಿವ ಡಾ.ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
ಮಣಿಪಾಲ ವಿವಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸುತಿದ್ದರು.
ಉತ್ತರ ಪ್ರದೇಶದಲ್ಲಿ ಅಲಹಾಬಾದ್ನಿಂದ ಕಾನ್ಪುರದವರೆಗಿನ ನಾಲಾ ಅಥವಾ ಡ್ರೈನೇಜ್ ಮೂಲಕ ಗಂಗಾನದಿಗೆ ಸೇರುತ್ತಿರುವ ಎಲ್ಲಾ ತ್ಯಾಜ್ಯ ಹಾಗೂ ಮಾಲಿನ್ಯಗಳನ್ನು ಶೀಘ್ರವೇ ನಿಲ್ಲಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಳು ಆಶ್ವಾಸನೆ ನೀಡಿದ್ದಾರೆ ಎಂದರು.
ಗಂಗಾ ಶುದ್ಧೀಕರಣದ ನಮ್ಮೆಲ್ಲಾ ಯೋಜನೆಗಳು ನಿಗದಿಯಾದಂತೆ ಪ್ರತಿದಿನ ಪ್ರಗತಿಯಾಗುತ್ತಿದೆ. ಉತ್ತರಖಂಡದಲ್ಲೂ ಯೋಜನೆ ಸುಸೂತ್ರವಾಗಿ ನಡೆಯು ತ್ತಿವೆ. ನನ್ನ ನಿರೀಕ್ಷೆಯಂತೆ ಮುಂದಿನ ಜನವರಿ ವೇಳೆ ಶೇ.70ರಿಂದ 80ರಷ್ಟು ಪ್ರಗತಿಯನ್ನು ನಾವು ಸಾಧಿಸಲಿದ್ದೇವೆ. ಈ ಯೋಜನೆಗೆ ಹಣಕಾಸಿನ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಡಾ.ಸಿಂಗ್ ನುಡಿದರು.
ಕೆಲವು ರಾಜ್ಯಗಳಲ್ಲಿ ಮತ್ತೆ ಹೆಚ್ಚುತ್ತಿರುವ ನಕ್ಸಲ್ ಸಮಸ್ಯೆಯ ನಿಯಂತ್ರಣದ ಕುರಿತು ಪ್ರಶ್ನಿಸಿದಾಗ, ಸರಕಾರ ಇದಕ್ಕೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸು ತ್ತಿದೆ. ಅವರು ಯುವಕರ ಬ್ರೈನ್ವಾಷ್ ಮಾಡಿ ತಮ್ಮ ಚಳವಳಿಗೆ ಸೇರಿಸಿಕೊಳ್ಳುತ್ತಾರೆ. ಅದನ್ನು ತಡೆಗಟ್ಟಿ, ಜನರಿಗೆ ಅವರ ನಿಜವಾದ ಸಿದ್ಧಾಂತದ ಕುರಿತು ಮನವರಿಕೆ ಮಾಡಬೇಕಿದೆ. ನಕ್ಸಲರು ಶಸ್ತ್ರಗಳೊಂದಿಗೆ ಮಮಕಾರ ಬೆಳೆಸಿಕೊಂಡಿದ್ದಾರೆ. ಅದನ್ನು ತಡೆಗಟ್ಟಬೇಕಿದೆ. ಅಕ್ರಮ ಶಸ್ತ್ರಗಳನ್ನು ಹೊಂದಿರುವ ಅವರದು ಅಸಾಂವಿಧಾನಿಕ ಚಳವಳಿಯಾಗಿದೆ. ಅದಕ್ಕೆ ಕಡಿವಾಣ ಹಾಕುತ್ತೇವೆ ಎಂದರು.
ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಸ್ಲೋಗನ್ ಏನು ಎಂದು ಪ್ರಶ್ನಿಸಿದಾಗ ‘ವಿಕಾಸ್ ಔರ್ ಸುರಕ್ಷಾ’ ನಮ್ಮ ಘೋಷಣೆಯಾಗಲಿದೆ. ಸುರಕ್ಷತೆ ಹಾಗೂ ಅಭಿವೃದ್ಧಿಗೆ ನಾವು ಹೆಚ್ಚಿನ ಒತ್ತು ನೀಡಲಿದ್ದೇವೆ ಎಂು ಡಾ.ಸತ್ಯಪಾಲ್ ಸಿಂಗ್ ನುಡಿದರು.