ಬಾಲ್ಯ ವಿವಾಹ: ಮುದ್ರಣ ಸಂಸ್ಥೆಗಳಿಗೆ ಸೂಚನೆ
ಉಡುಪಿ, ಸೆ. 26: ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಂತೆ 18 ವರ್ಷದೊಳಗಿನ ಯಾವುದೇ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಯಾವುದೇ ಗಂಡು ಮಕ್ಕಳಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುವುದು. ಈ ಕಾಯ್ದೆಯ ಪ್ರಕಾರ ಬಾಲ್ಯ ವಿವಾಹ ಆದಲ್ಲಿ ಕೇವಲ ಹುಡುಗ, ಹುಡುಗಿಯ ತಂದೆ ತಾಯಿ ಅಲ್ಲದೇ ಪೂಜಾರಿಗಳು, ಸಂಬಂಧಿಕರು ಪ್ರೇರೇಪಿಸಿದವರು, ಉತ್ತೇಜನ ನೀಡಿದವರು, ಬಾಲ್ಯ ವಿವಾಹ ತಡೆಯಲು ವಿಫಲರಾದವರು ಮತ್ತು ಬಾಗವಹಿಸಿದವರು ಎಲ್ಲರೂ ಅಪರಾಧಿಗಳೇ ಆಗುತ್ತಾರೆ.
ಅದರಂತೆ ಅವರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿದ್ದು, ಬಾಲ್ಯ ವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಪ್ರಕಾರ ತಪ್ಪಿತಸ್ಥರು ಕನಿಷ್ಟ ಒಂದು ವರ್ಷದಿಂದ ಗರಿಷ್ಟ 2 ವರ್ಷಗಳವರೆಗೆ ಕಾರಾಗೃಹವಾಸ ಮತ್ತು ಒಂದು ಲಕ್ಷ ರೂ.ವರೆಗೆ ದಂಡ ಶಿಕ್ಷೆಗೆ ಗುರಿಯಾಗುವರು.
ಗ್ರಾಹಕರು ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲು ಬಂದಾಗ ಮುದ್ರಣ ಕಾರರು ಕಡ್ಡಾಯವಾಗಿ ವಧು ಮತ್ತು ವರರ ವಯಸ್ಸಿನ ದೃಢೀಕರಣ ಪತ್ರವನ್ನು ಕುಟುಂಬದವರಿಂದ ಪಡೆದು ಹುಡುಗನಿಗೆ 21 ವರ್ಷ, ಹುಡುಗಿಗೆ 18 ವರ್ಷ ಪೂರ್ಣವಾಗಿದೆ ಎಂದು ಖಾತ್ರಿ ಪಡಿಸಿದ ನಂತರವಷ್ಟೇ ಮದುವೆ ಲಗ್ನ ಪತ್ರ ಮುದ್ರಿಸಿಕೊಡಲು ಸೂಚಿಸಲಾಗಿದೆ.
ಒಂದು ವೇಳೆ ಮುದ್ರಿಸಿದ ಲಗ್ನಪತ್ರಿಕೆಯ ಮದುವೆಯ ನಂತರ ಬಾಲ್ಯ ವಿವಾಹವೆಂದು ಕಂಡುಬಂದಲ್ಲಿ ಕಾನೂನು ಪ್ರಕಾರ ಮುದ್ರಣಕಾರರನ್ನು ತಪ್ಪಿತಸ್ಥ ರೆಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿದೆ. ವಧು-ವರರ ವಯಸ್ಸಿನ ದೃಢೀಕರಣ ಪತ್ರಗಳನ್ನು ಪರಿಗಣಿಸುವಾಗ ಜನನ ಪ್ರಮಾಣ ಪತ್ರ, ಶಾಲಾ ವಯಸ್ಸಿನ ದೃಢೀಕರಣ ಪತ್ರ, ಎಸೆಸೆಲ್ಸಿ ಅಂಕಪಟ್ಟಿ ಅಥವಾ ಸರಕಾರಿ ವೈದ್ಯರು ರೇಡಿಯೋಲಜಿ ಪರೀಕ್ಷೆ ನಡೆಸಿ ನೀಡಿದ ದೃಢೀಕರಿಸಿದ ವಯಸ್ಸಿನ ಪ್ರಮಾಣ ಪತ್ರಗಳು ಮಾತ್ರ ಮದುವೆಗೆ ಅರ್ಹವಾಗಿರುತ್ತವೆ.
ಆದ್ದರಿಂದ ಜಿಲ್ಲೆಯ ಎಲ್ಲಾ ಮುದ್ರಣಕಾರರು ಮತ್ತು ಡಿಟಿಪಿ ಕೇಂದ್ರದವರು ಆಮಂತ್ರಣ ಪತ್ರಿಕೆ ಮುದ್ರಿಸುವಾಗ ವಯಸ್ಸನ್ನು ಖಾತ್ರಿ ಪಡಿಸಿಕೊಂಡ ನಂತರವೇ ಮುದ್ರಿಸುವ ಮೂಲಕ ಬಾಲ್ಯವಿವಾಹವನ್ನು ತಡೆಗಟ್ಟಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು. ತಮ್ಮಲ್ಲಿಗೆ ಬರುವ ಎಲ್ಲಾ ಗ್ರಾಹಕರಿಗೂ ಜಾಗೃತಿ ಮೂಡಿಸಿ, ಅವರಿಂದ ವಯಸ್ಸಿನ ದೃಢೀಕರಣ ಪತ್ರ ಪಡೆದು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಅದರ ದಾಖಲೆಗಳನ್ನು ಇರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಬಾಲ್ಯ ವಿವಾಹ ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಯ ಅ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.