ಪತ್ರಕರ್ತರ ಪ್ರಶಸ್ತಿಗಳಿಗೆ ಲೇಖನ-ವರದಿಗಳ ಆಹ್ವಾನ
ಉಡುಪಿ, ಸೆ.26: ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ- ವರದಿಗಳನ್ನು ಬರೆದ ಪತ್ರಕರ್ತರಿಗೆ ಹಾಗೂ ಮೈಸೂರಿನ ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ತಲಾ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ಲೇಖ ಹಾಗೂ ವರದಿಗಳನ್ನು ಆಹ್ವಾನಿಸಿದೆ.
2018ರ ಜನವರಿಯಿಂದ ಸೆಪ್ಟಂಬರ್ ಕೊನೆಯವರೆಗೆ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ-ವರದಿ ಹಾಗೂ ಇದೇ ಅವಧಿಯ ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ- ವರದಿ ಗಳನ್ನು ಪ್ರತ್ಯೇಕವಾಗಿ ಕಳುಹಿಸಬೇಕು. ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ.
ಲೇಖನ- ವರದಿಗಳನ್ನು ಅ.26ರ ಒಳಗೆ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು ಇವರಿಗೆ ಕಳುಹಿಸಬೇಕು. ಲಕೋಟೆಯ ಮೇಲೆ ಅಭಿಮಾನಿ ಪ್ರಶಸ್ತಿ-2018 ಹಾಗೂ ಮೈಸೂರು ದಿಗಂತ ಪ್ರಶಸ್ತಿ -2018 ಎಂದು ನಮೂದಿಸಿರಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.