ಅ. 2ರಂದು ಇಎಸ್ಐ ಸೌಲಭ್ಯಕ್ಕಾಗಿ ಉಪವಾಸ ಸತ್ಯಾಗ್ರಹ
ಉಡುಪಿ, ಸೆ. 27: ಇಎಸ್ಐ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮಾಸ್ ಇಂಡಿಯಾ ಮತ್ತು ಮಾಹಿತಿ ಸೇವಾ ಸಮಿತಿಯ ವತಿಯಿಂದ ಉಪವಾಸ ಸತ್ಯಾಗ್ರಹವನ್ನು ಅ.2ರಂದು ಬೆಳಗ್ಗೆ 8:30ರಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ, ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಯ ಎದುರು ನಡೆಸಲಾಗುವುದು ಎಂದು ಮಾಸ್ ಇಂಡಿಯಾ ಕರ್ನಾಟಕ ಅಧ್ಯಕ್ಷ ಜಿ.ಎ.ಕೋಟೆಯರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಇಎಸ್ಐ ಚಿಕಿತ್ಸೆಯನ್ನು ಕೊಡು ವಂತೆ ಕರಾರು ಪತ್ರವನ್ನು ಇಎಸ್ಐ ಕಾರ್ಪೊರೇಷನ್ 10 ದಿನಗಳ ಒಳಗೆ ಮಾಡಬೇಕು. ಇಎಸ್ಐ ಕಾರ್ಪೊರೇಷನ್ ಹಾಗೂ ಇಎಸ್ಐಎಸ್ ಒಟ್ಟುಗೂಡಿಸಿ ಇಎಸ್ಐ ಕಾರ್ಪೊರೇಷನ್ ಆಗಿ ಮಾರ್ಪಡು ಮಾಡಬೇಕು ಎಂದು ಒತ್ತಾಯಿಸಿದರು.
ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಮಂದಿ ಕಾರ್ಮಿಕರು ಇಎಸ್ಐ ಪಾವತಿಸುತ್ತಿದ್ದು, ಇದರಿಂದ ವಾರ್ಷಿಕ 76 ಕೋಟಿ ರೂ. ಸಂಗ್ರಹ ವಾಗುತ್ತಿದೆ. ಆದುದರಿಂದ ಉಡುಪಿಯಲ್ಲಿ ಇಎಸ್ಐ ಪ್ರಾದೇಶಿಕ ಕಚೇರಿಯನ್ನು ಕೂಡಲೇ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾಪು ಯೂತ್ ಫ್ರಂಟ್ನ ವಿಶ್ವನಾಥ್, ರಾಜ್ಯ ಮಹಿಳಾ ಅಧ್ಯಕ್ಷೆ ವೀಣಾ ದೀಪಕ್, ಪಾದೂರು ಸಮಿತಿಯ ಅಧ್ಯಕ್ಷ ಹರಿಕೃಷ್ಣ ತಂತ್ರಿ ಉಪಸ್ಥಿತರಿದ್ದರು.