ಮಂಗಳೂರು: ವಿಕಾಸ್ ಕಾಲೇಜಿನಲ್ಲಿ ಜೀವ ರಕ್ಷಣೆಯ ಕಾರ್ಯಾಗಾರ
ಮಂಗಳೂರು, ಸೆ. 27: ಸಮಾಜದ ಆರೋಗ್ಯ ಮತ್ತು ಆರೈಕೆ ಸೇವೆಯ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ‘ಆಕಸ್ಮಿಕ ಅಪಘಾತದ ಸಂದರ್ಭ ಮೂಲಭೂತ ಜೀವ ರಕ್ಷಣೆಯ ವಿಧಿವಿಧಾನ’ದ ಬಗ್ಗೆ ವೈದ್ಯಕೀಯ ಕಾರ್ಯಾಗಾರ ನಗರದ ವಿಕಾಸ್ ಕಾಲೇಜಿನಲ್ಲಿ ಗುರುವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಖ್ಯಾತ ಕೀಲು ಮತ್ತು ಮೂಳೆಶಾಸ್ತ್ರ ತಜ್ಞ ಡಾ. ಸುಧಾಕರ್ ಮಾತನಾಡಿ, ರಸ್ತೆ ಅಪಘಾತ, ಸಂಭಾವ್ಯ ಹೃದಯಾಘಾತ ಮೊದಲಾದ ಆಕಸ್ಮಿಕ ಅಪಘಾತ ಸಂಭವಿಸಿದಲ್ಲಿ ಜೀವಕ್ಕೆ ಅಪಾಯ ಒದಗಿದಾಗ ಪ್ರಾಥಮಿಕ ಜೀವ ರಕ್ಷಣೆ ಚಿಕಿತ್ಸೆಯ ಬಗ್ಗೆ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು.
ಆಕಸ್ಮಿಕ ಅಪಘಾತ ಸಂದರ್ಭದಲ್ಲಿ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕೆಂದು ಸಲಹೆ ನೀಡಿದರು. ಕೆಎಂಸಿ ವೈದ್ಯಕೀಯ ಕಾಲೇಜಿನ ಹಿರಿಯ ಅರಿವಳಿಕೆ ಶಾಸ್ತ್ರಜ್ಞ ಡಾ.ರಂಜನ್ ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವ ವಿವರಿಸಿ, ಅಪಘಾತದಲ್ಲಿ ಜೀವ ರಕ್ಷಣೆಯ ಜ್ಞಾನ ಒಂದು ಜೀವದಾನಕ್ಕೆ ಸಮಾನ ಎಂದು ಹೇಳಿದರು.
ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರಶಾಂತ್ ರೈ, ಶೈಲೇಂದ್ರ ಪೈ, ಪಬ್ಲಿಸಿಟಿ ಕನ್ಸಲ್ಟೆಂಟ್ ಎಂ.ವಿ. ಮಲ್ಯ, ಸುಮಿತ್ ರಾವ್, ವಿಕಾಸ್ ಎಜ್ಯು ಸೊಲ್ಯುಶನ್ನ ಸಲಹೆಗಾರರಾದ ಡಾ.ಅನಂತ್ ಪ್ರಭು ಜಿ., ಸಮೂಹ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿಗಳಾದ ಪಾರ್ಥಸಾರಥಿ ಪಾಲೆಮಾರ್, ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಕೌನ್ಸೆಲರ್ ಡಾ.ಮಂಜುಳಾ ರಾವ್, ವಿಕಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ರಾಜಾರಾಮ್ ರಾವ್ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಡಾ.ರಂಜನ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಉಪನ್ಯಾಸಕ ಅಜಿತ್ ರೈ ಸ್ವಾಗತಿಸಿ, ಲಕ್ಷ್ಮೀಶ್ ಭಟ್ ವಂದಿಸಿದರು.