ಬೆಳ್ತಂಗಡಿ: ವರ್ಗಾವಣೆಗೊಂಡ ಶಿಕ್ಷಕಿ ಮರಳಿ ಅಂಗನವಾಡಿಗೆ; ಪೋಷಕರ ವಿರೋಧ
ಬೆಳ್ತಂಗಡಿ, ಸೆ. 27: ಮಿತ್ತಬಾಗಿಲು ಗ್ರಾಮದ ಕೊಲ್ಲಿ ಅಂಗನವಾಡಿ ಕೇಂದ್ರದಿಂದ ವರ್ಗಾವಣೆಗೊಂಡ ಶಿಕ್ಷಕಿ ಶಾಲೆಗೆ ಮರಳಿ ಬಂದಿರುವುದನ್ನು ವಿರೋಧಿಸಿ ಗುರುವಾರ ಅಂಗನವಾಡಿಯಲ್ಲಿ ಪೋಷಕರು ಹಾಗೂ ಮಕ್ಕಳು ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರಿಸುತ್ತಿದ್ದಾರೆ. ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಯುತ್ತಿದ್ದು ಮಧ್ಯಾಹ್ನದ ಊಟವನ್ನೂ ಬಿಟ್ಟು ಕುಳಿತಿರುವ ಪ್ರತಿಭಟನಾಕಾರರು ಸ್ಪಷ್ಟವಾದ ಭರವಸೆ ಸಿಗುವ ವರೆಗೆ ಅಂಗನವಾಡಿಯಿಂದ ಕದಲುವುದಿಲ್ಲ ಎಂದು ಕುಳಿತಿದ್ದಾರೆ.
ಇಲ್ಲಿನ ಅಂಗನವಾಡಿ ಕೇಂದ್ರದ ಶಿಕ್ಷಕಿ ವಿಜಯಲಕ್ಷ್ಮಿಅವರು ಪೋಷಕರ ಹಾಗೂ ಮಕ್ಕಳ ಪ್ರತಿಭಟನೆಯ ಹಿನ್ನಲೆಯಲ್ಲಿ ಅವರನ್ನು ಮೂರು ತಿಂಗಳುಗಳ ಹಿಂದೆ ಅಂಗನವಾಡಿಯಿಂದ ಬದಲಿಸಲಾಗಿತ್ತು .ಗುರುವಾರ ಅವರು ಅಂಗನವಾಡಿಗೆ ಹಿಂತಿರುಗಿ ಬಂದಿದ್ದರು ಇದು ಪೋಷಕರ ಹಾಗೂ ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ವಿಜಯಲಕ್ಷ್ಮಿ ಅವರು ಅಂಗನವಾಡಿಗೆ ಆಗಮಿಸುತ್ತಿದ್ದಂತೆಯೇ ಪೋಷಕರು ಹಾಗೂ ಸ್ಥಳೀಯ ಜನರು ಪ್ರತಿಭಟನೆ ಆರಂಬಿಸಿದರು. ಯಾವುದೇ ಕಾರಣಕ್ಕೂ ಅವರಿಗೆ ಅಂಗನವಾಡಿಗೆ ಪ್ರವೇಶ ನೀಡುವುದಿಲ್ಲ ಎಂದರು.
ಅಂಗನವಾಡಿಯ ಎಲ್ಲ ಮಕ್ಕಳು ಅಂಗನವಾಡಿಯಿಂದ ಹೊರ ಬಂದು ಪೋಷಕರೊಂದಿಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಗ್ರಾಮಸ್ಥರೂ ಬೆಂಬಲ ಸೂಚಿಸಿದರು. ಪ್ರತಿಭಟನಾ ನಿರತರು ವಿಜಯಲಕ್ಷ್ಮಿಯವರು ಅಂಗನವಾಡಿಯಿಂದ ಹಿಂತಿರುಗುವ ವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಅಂಗನವಾಡಿಯ ಮುಂದೆಯೇ ಕುಳಿತರು.
ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಿಯಾ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರ ರೊಂದಿಗೆ ಮಾತುಕತೆ ನಡೆಸಿದರು, ಕಾನೂನು ಪ್ರಕಾರವಾಗಿ ಅವರನ್ನು ಈ ಅಂಗನವಾಡಿಗೆ ಹಾಕಿದ್ದೇವೆ ನಾಳೆಯಿಂದ ಅವರೇ ಶಿಕ್ಷಕರಾಗಿರುತ್ತಾರೆ ಎಂದರು ಇದು ಪ್ರತಿಭಟನಾಕಾರರನ್ನು ಕೆರಳಿಸಿತ್ತು ಅಧಿಕಾರಿಗಳು ನೀಡಿದ ಯಾವುದೇ ಉತ್ತರಗಳಿಗೂ ಜನರು ಒಪ್ಪಲೇ ಇಲ್ಲ. ಪೊಲೀಸ್ ಅಧಿಕಾರಿಗಳು ಆಗಮಿಸಿ ಮಾತುಕತೆ ನಡೆಸಿದರೂ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆಯಲು ಸಿದ್ದರಾಗಿಲ್ಲ. ಅಂಗನವಾಡಿಗೆ ಬರುವ ಎಲ್ಲ ಆಹಾರವನ್ನು ಕದ್ದು ಮಾರಾಟ ಮಾಡುವ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ, ಮಕ್ಕಳಿಗೆ ಹಿಂಸೆ ನೀಡುವ ಶಿಕ್ಷಕಿ ನಮಗೆ ಯಾವುದೇ ಕಾರಣಕ್ಕೂ ಬೇಡ. ಅವರು ಅಂಗನವಾಡಿಗೆ ಬರುವುದಾದರೆ ನಾವು ಅಲ್ಲಿಗೆ ಬರುವುದಿಲ್ಲ ಎಂದೇ ಪಟ್ಟು ಹಿಡಿದಿದ್ದಾರೆ. ಅವರು ಅಂಗನವಾಡಿಯಿಂದ ಹೋಗುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ರಾತ್ರಿಯಾದರೂ ಅಂಗನವಾಡಿ ಬಿಟ್ಟು ಕದಲುವುದಿಲ್ಲ ಎಂದು ಕುಳಿತಿದ್ದಾರೆ.
ಇಂತಹ ಶಿಕ್ಷಕಿ ನಮ್ಮ ಅಂಗನವಾಡಿಗೆ ಬೇಡ ಇವರಿಂದ ಗ್ರಾಮಸ್ಥರು ಪೋಷಕರು ಮಕ್ಕಳು ಪಡೆದಿರುವ ಕಿರುಕುಳ ಸಾಕಷ್ಟಿದೆ ಅವರನ್ನು ಇನ್ನೂ ಮೂಂದುವರಿಸಲು ಅವಕಾಶ ನೀಡುವುದಿಲ್ಲ. ನಮಗೆ ಹಾಗೆ ಮಾಡಲು ಸಾಧ್ಯವಿಲ್ಲ ಇದು ನಮ್ಮ ಅಂಗನವಾಡಿ ಕೇಂದ್ರ ಅದನ್ನು ಉಳಿಸಿಕೊಳ್ಳಲು ಯಾವ ರೀತಿಯ ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಒಂದೋ ಇಲ್ಲಿ ನಾವು ಹಾಗೂ ಮಕ್ಕಳು ಇರಬೇಕು ಇಲ್ಲವಾದಲ್ಲಿ ಆಕೆಯಿರಬೇಕು ಆಕೆ ಇಲ್ಲಿಂದ ಹೋಗುವವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ.
- ಹರಿಣಿ ಪೋಷಕಿ,