ಬಂಟ್ವಾಳ: ಫೇಸ್ಬುಕ್ನಲ್ಲಿ ಕಮೆಂಟ್ ಹಾಕಿದ ಆರೋಪ; ತಂಡದ ನಡುವೆ ಘರ್ಷಣೆ
ಗ್ರಾಮ ಪಂಚಾಯತ್ ಸದಸ್ಯನಿಗೆ ಹಲ್ಲೆ
ಬಂಟ್ವಾಳ, ಸೆ. 27: ಫೇಸ್ಬುಕ್ನಲ್ಲಿ ಕಮೆಂಟ್ ಹಾಕಿದ ವಿಷಯಕ್ಕೆ ಸಂಬಂಧಿಸಿ ವಿಚಾರಿಸಲು ಬಂದ ತಂಡದ ನಡುವಿನ ಘರ್ಷಣೆ ವೇಳೆ ತಡೆಯಲು ಬಂದ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬೈರಿಕಟ್ಟೆ ಮೈದಾನದಲ್ಲಿ ಗುರುವಾರ ಸಂಜೆ ನಡೆದಿದೆ.
ಅಳಿಕೆ ಗ್ರಾಮ ಪಂಚಾಯತ್ ಸದಸ್ಯ, ಅಳಿಕೆ ಗ್ರಾಮದ ಕುಡಿಯರ ಮೂಲೆ ನಿವಾಸಿ ರವೀಶ (38) ಹಲ್ಲೆಗೊಳಗಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ವಿಚಾರಯೊಂದಕ್ಕೆ ಸಂಬಂಧಿಸಿ ಇಮ್ರಾನ್ ಎಂಬವರು ಕಮೆಂಟ್ ಮಾಡಿದ್ದರು ಎನ್ನಲಾಗಿದೆ. ಗುರುವಾರ ಸಂಜೆ ಬೈರಿಕಟ್ಟೆ ಸಮೀಪದ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ವೇಳೆ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಎಂಟು ಮಂದಿಯ ತಂಡ ಕಮೆಂಟ್ ಹಾಕಿದ ವಿಚಾರದಲ್ಲಿ ಇಮ್ರಾನ್ನಲ್ಲಿ ವಿಚಾರಿಸುತ್ತಿದ್ದ ವೇಳೆ ಸಂದೀಪ್ ಎಂಬವರು ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಲು ಮುಂದಾಗಿದ್ದಾರೆ. ಈ ಸಂದರ್ಭ ಇಮ್ರಾನ್ ಹಾಗೂ ಸಂದೀಪ್ ಅವರ ಮೇಲೆ ತಂಡ ಹಲ್ಲೆಗೆ ಯತ್ನಿಸಿದಾಗ ರವೀಶ್ ಅವರು ತಡೆಯಲು ಮುಂದಾಗುತ್ತಿದ್ದಂತೆ ತಂಡ ದೊಣ್ಣೆದಿಂದ ರವೀಶ್ಗೆ ಗಂಭೀರ ರೀತಿಯಲ್ಲಿ ಹಲ್ಲೆ ನಡೆಸಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಸ್ಥಳೀಯರು ಜಮಾಯಿಸುತ್ತಿದ್ದಂತೆ ತಂಡ ಪರಾರಿಯಾಗಿದೆ. ಈ ಬಗ್ಗೆ ರವೀಶ್ ಅವರು ಚಂದ್ರ ಕನ್ಯಾನ, ಮಂಜುನಾಥ ಅಂಗ್ರಿ, ಕಿರಣ್ ಕೇಪು, ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.