ಪಂಪ್ವೆಲ್ ಮೇಲ್ಸೇತುವೆ ಹೋರಾಟ ಸಮಿತಿ ರಚನೆ
ಮಂಗಳೂರು, ಸೆ.27: ಪಂಪ್ವೆಲ್ ಮೇಲ್ಸೇತುವೆ ನಿರ್ಮಾಣ ವಿಳಂಬದಿಂದ ಹಲವಯ ಸಮಸ್ಯೆಗಳು ಉದ್ಭವಿಸುತ್ತಿದ್ದು, ಸಮಸ್ಯೆಗಳಿಗೆ ಎದುರಾಗಿ ಐಕ್ಯತೆಯಿಂದ ಹೋರಾಟ ನಡೆಸಲು ಗರೋಡಿಯ ಸಮೃದ್ಧಿ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿ ಪಂಪ್ವೆಲ್ ಮೇಲ್ಸೇತುವೆ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಪಂಪ್ವೆಲ್ ಮೇಲ್ಸೇತುವೆ ಕೆಲಸ ಪ್ರಾರಂಭಗೊಂಡು ಎಂಟು ವರ್ಷಗಳು ಕಳೆದಿವೆ. ಆದರೆ ಸೇತುವೆ ಕೆಲಸ ಇನ್ನು ಪೂರ್ಣಗೊಂಡಿಲ್ಲ . ಈ ಸಮಸ್ಯೆಯಿಂದ ದಿನನಿತ್ಯ ಟ್ರಾಫಿಕ್ ಸಮಸ್ಯೆ, ಅಪಘಾತ ಗಳಿಂದಾಗಿ ಹಲವು ಜೀವಹಾನಿ ಸಂಭವಿಸಿದೆ. ಕಳೆದ ಹಲವು ವರುಷಗಳಿಂದ ಜನ ನಿತ್ಯ ಅನುಭವಿಸುವ ಈ ಸಮಸ್ಯೆಯಿಂದ ಜನ ತಾಳ್ಮೆ ಕಳೆದು ಆಕ್ರೋಶಗೊಂಡಿದ್ದಾರೆ.
ಇದರ ಪರಿಣಾಮವಾಗಿ ಪಂಪ್ವೆಲ್ ಮೇಲ್ಸೇತುವೆ ಕೂಡಲೇ ನಿರ್ಮಿಸಬೇಕು, ಹೆದ್ದಾರಿ ಅವ್ಯವಸ್ಥೆಯ ಸರಿಪಡಿಸಬೇಕು ಹಾಗೂ ಸರ್ವಿಸ್ ರಸ್ತೆ ನಿರ್ಮಿಸಬೇಕೆಂಬ ಸಮಾನವಾದ ಬೇಡಿಕೆಯನ್ನಿಟ್ಟು ಈ ಭಾಗದ ವಿವಿಧ ಸಂಘಟನೆಗಳು ಸಂಘ ಸಂಸ್ಥೆಗಳು ಸಮಿತಿಯನ್ನು ರಚಿಸಿವೆ.
ಸಭೆಯಲ್ಲಿ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸ್ಥಳೀಯ ವಿವಿಧ ಸಂಘಸಂಸ್ಥೆ, ಸಂಘಟನೆಗಳ ಮುಖಂಡರಾದ ಸುನೀಲ್ಕುಮಾರ್ ಬಜಾಲ್, ಸಂತೋಷ್ ಬಜಾಲ್, ಕಾರ್ಪೊರೇಟರ್ ಅಪ್ಪಿ, ಸುಜಾತಾ, ಹೇಮಂತ್ ಗರೋಡಿ, ಯುವಜನ ಮುಖಂಡರಾದ ಸಾದೀಕ್ ಕಣ್ಣೂರು, ನವೀನ್ ಕೊಂಚಾಡಿ, ಶಶಿಧರ್ ಕುಂಟಲಗುಡ್ಡೆ, ಕಾರ್ಮಿಕ ಮುಖಂಡರಾದ ಸುರೇಶ್ ಬಜಾಲ್, ಲೋಕೇಶ್ ಎಂ., ಸಂತೋಷ್ ಶಕ್ತಿನಗರ, ಸಾರಿಗೆ ಯೂನಿಯನ್ ಮುಖಂಡರಾದ ಅನ್ಸರ್ ಫೈಸಲ್ ನಗರ, ಕಮಲಾಕ್ಷ, ಡೊಲ್ಫಿ ಡಿಸೋಜ, ಜೆರಾಲ್ಡ್, ನಿತಿನ್ ಬಂಗೇರ, ಫೈರೋಝ್ ಮುಂತಾದವರು ಉಪಸ್ಥಿತರಿದ್ದರು.