ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ಧ: ಡಾ.ಸತ್ಯಪಾಲ್ ಸಿಂಗ್
ಮಣಿಪಾಲ, ಸೆ. 27: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ಧಗೊಂಡಿದ್ದು, ಇದಕ್ಕಾಗಿ ಇರುವ ಸಮಿತಿ ಶಿಕ್ಷಣ ನೀತಿಯನ್ನು ಅಂತಿಮಗೊಳಿಸಿದೆ. ಶೀಘ್ರವೇ ಇದು ಕ್ಯಾಬಿನೆಟ್ ಸಮಿತಿಯ ಮುಂದೆ ಚರ್ಚೆಗೆ ಬರುವ ನಿರೀಕ್ಷೆ ಇದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ, ಜಲ ಸಂಪನ್ಮೂಲ ಹಾಗೂ ಗಂಗಾನದಿ ಅಭಿವೃದ್ಧಿ ಸಚಿವ ಡಾ.ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
ಮಣಿಪಾಲದ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ (ಟ್ಯಾಪ್ಮಿ) ಲೀಡರ್ಶಿಪ್ ಉಪನ್ಯಾಸ ಸರಣಿ ಮಾಲಿಕೆಯಲ್ಲಿ 26ನೇ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.
ಹೊಸ ಶಿಕ್ಷಣ ನೀತಿಯಲ್ಲಿ ಐದು ಪ್ರಮುಖ ಆಧಾರ ಸ್ತಂಭಗಳಿವೆ. ಇವುಗಳೆಂದರೆ ಅಧಿಕ ಮಂದಿಗೆ ಶಿಕ್ಷಣದ ಲಭ್ಯತೆ, ಕೈಗೆಟಕುವ ಶಿಕ್ಷಣ, ಗುಣಮಟ್ಟದ ಶಿಕ್ಷಣ, ವೌಲ್ಯ ಹಾಗೂ ಪ್ರಾದೇಶಿಕ ಅಸಮಾನತೆಗೆ ಕಡಿವಾಣ. ಶಿಕ್ಷಣ ಸಮಾಜದ ಎಲ್ಲಾ ವರ್ಗಕ್ಕೂ ಸಮಾನವಾಗಿ ದೊರೆಯುವಂತೆ ಮಾಡಲು ಹೊಸ ಶಿಕ್ಷಣ ನೀತಿಯಲ್ಲಿ ಆದ್ಯತೆಯನ್ನು ನೀಡಲಾಗಿದೆ ಎಂದರು.
ಹೊಸ ಶಿಕ್ಷಣ ನೀತಿಯನ್ನು ರೂಪಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದೇವೆ. ಅದು ಯಾವಾಗ ಕ್ಯಾಬಿನೆಟ್ ಸಮಿತಿ ಮುಂದೆ ಬರಲಿದೆ, ಯಾವಾಗ ಸಂಸತ್ತಿನಲ್ಲಿ ಮಂಡನೆಯಾಗಲಿದೆ ಎಂಬ ಬಗ್ಗೆ ನಾನು ಹೇಳುವಂತಿಲ್ಲ ಎಂದರು.
ಶಿಕ್ಷಣದ ಪ್ರಾಥಮಿಕ ಉದ್ದೇಶ ವಿದ್ಯಾರ್ಥಿಗಳ ಬದುಕಿನಲ್ಲಿ ಮೌಲ್ಯಗಳು ಹಾಗೂ ನೈತಿಕತೆಯನ್ನು ತುಂಬುವುದಾಗಿದೆ. ಜೀವನ ನಿರ್ವಹಣೆಯ ಕುರಿತು ಯಾವುದೇ ವಿದ್ಯಾಸಂಸ್ಥೆಯೂ ನಿಮಗೆ ಕಲಿಸುವುದಿಲ್ಲ. ಆದರೆ ಇದು ತುಂಬಾ ಮುಖ್ಯ. ಕೆಲವರು ಜನ್ಮತ: ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇನ್ನು ಕೆಲವರು ನಾಯಕತ್ವ ಗುಣಗಳನ್ನು ಕಲಿಯುತ್ತಾರೆ. ಹೆಚ್ಚಿನ ನಾಯಕರು ಸೃಷ್ಟಿಸಲ್ಪಟ್ಟವರಾಗಿರುತ್ತಾರೆ ಎಂದರು.
ಜೀವನದಲ್ಲಿ ನೀವು ಯಶಸ್ಸನ್ನು ಕಾಣಲು ಕೆಲವು ಮೂಲಭೂತ ಗುಣಗಳನ್ನು ಹೊಂದಿರಬೇಕು. ಕಠಿಣ ಪರಿಶ್ರಮ, ಸಮರ್ಪಣಾಭಾವ, ಆತ್ಮಸಾಕ್ಷಿಯಲ್ಲಿ ನಂಬಿಕೆ ಇರಬೇಕಾಗುತ್ತದೆ. ಅಂಥವರು ಮಾತ್ರ ಏನನ್ನಾದರೂ ಸಾಧಿಸಬಲ್ಲರು ಎಂದು ಡಾ.ಸಿಂಗ್ ವಿವರಿಸಿದರು.
ಮಾನವ ಶರೀರ ಎಂಬುದು ಪರಿಪೂರ್ಣತೆಗೊಂದು ಅತ್ಯುತ್ತಮ ಉದಾಹರಣೆ. ಇದನ್ನು ಇನ್ನಷ್ಟು ಪರಿಪೂರ್ಣಗೊಳಿಸಲು ಸಾಧ್ಯವೇ ಇಲ್ಲ. ಯಾರು ಕೂಡಾ ಇದನ್ನು ಮಾಡಲು ಸಾಧ್ಯವಾಗಿಲ್ಲ. ಈ ಪ್ರಪಂಚದಲ್ಲಿ ಮಾನವನಿಗೆ ಇನ್ನೊಂದು ಜೀವಿಯನ್ನು ಸೃಷ್ಟಿಸಲು ಇದುವರೆಗೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ, ಪ್ರಯತ್ನಗಳನ್ನು ನಡೆಸಿಯೂ ಮಾನವ ಹೊಸ ಜೀವಿಯ ಸೃಷ್ಟಿಗೆ ವಿಫಲನಾಗಿದ್ದಾನೆ ಎಂದರು.
ಆದುದರಿಂದ ನಮ್ಮ ಈ ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸಿದರೆ ಅದಕ್ಕೆ ಕೆಲವು ಸೂತ್ರಗಳಿವೆ. ಆತ್ಮವಿಶ್ವಾಸ, ಬದ್ಧತೆ, ಸಮರ್ಥವಾದ ಸಂವಹನ, ನಡತೆ, ಸಂಪರ್ಕ, ಸಾಮೂಹಿಕ ಜವಾಬ್ದಾರಿ ಇವುಗಳಲ್ಲಿ ಸೇರಿವೆ. ಇವುಗಳನ್ನು ಸರಿಯಾಗಿ ಬಳಸಿದರೆ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾದ್ಯವಾಗುತ್ತದೆ ಎಂದರು. ಕೊನೆಯಲ್ಲಿ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವೇದಿಕೆಯಲ್ಲಿ ಟ್ಯಾಪ್ಮಿಯ ಆಡಳಿತ ಮಂಡಳಿಯ ಟ್ರಸ್ಟಿಗಳಲ್ಲೊಬ್ಬರಾದ ಡಾ. ಎಚ್.ಶಾಂತಾರಾಮ್ ಉಪಸ್ಥಿತರಿದ್ದರು. ಟ್ಯಾಪ್ಮಿಯ ನಿರ್ದೇಶಕ ಡಾ.ಮಧು ವೀರರಾಘವನ್ ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ರಾಜೇಶ್ ಶಾ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.