ಸಮೀರ್ ಕೊಲೆ ಪ್ರಕರಣ: ಪತ್ನಿ ಫಿರ್ದೌಸ್ ಗಾಗಿ ಶೋಧ; ಎಸ್ಪಿ ನಿಂಬರ್ಗಿ
ಉಡುಪಿ, ಸೆ. 28: ಗಂಜಿಮಠದ ಮೊಹಮ್ಮದ್ ಸಮೀರ್ ಕೊಲೆ ಹಾಗೂ ಆತನ ಪತ್ನಿ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾರಿನ ಫಿರ್ದೌಸ್ ನಾಪತ್ತೆ ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಇಂದು ನಡೆದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಸಮೀರ್ ಸಂಬಂಧಿಕರು ಮಂಗಳೂರಿನಿಂದ ಪ್ರತ್ಯೇಕವಾಗಿ ಎರಡು ಕರೆಗಳನ್ನು ಮಾಡಿ ಸಮೀರ್ ಕೊಲೆಗೆ ನ್ಯಾಯ ಒದಗಿಸಬೇಕು ಹಾಗೂ ಫಿರ್ದೌಸ್ ಳನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದರು.
ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್ಪಿ, ಈ ಸಂಬಂಧ ಕಾಪುವಿನಲ್ಲಿ ಫಿರ್ದೌಸ್ ನಾಪತ್ತೆ, ಬಜ್ಪೆಯಲ್ಲಿ ಸಮೀರ್ ನಾಪತ್ತೆ, ಬೆಂಗಳೂರಿನಲ್ಲಿ ಸಮೀರ್ ಕಿಡ್ನಾಪ್ ಹಾಗೂ ತಮಿಳುನಾಡಿನಲ್ಲಿ ಸಮೀರ್ ಕೊಲೆ ಪ್ರಕರಣಗಳು ದಾಖಲಾಗಿವೆ. ಕೊಲೆ ತಮಿಳುನಾಡು ರಾಜ್ಯದಲ್ಲಿ ನಡೆದಿರುವುದರಿಂದ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಮೀರ್ ಕೊಲೆಯಲ್ಲಿ ಪ್ರಿಯಕರನೊಂದಿಗೆ ಭಾಗಿಯಾಗಿದ್ದಾಳೆ ಎಂದು ಹೇಳಲಾಗಿದ್ದು, ಇದೀಗ ನಾಪತ್ತೆಯಾಗಿರುವ ಫಿರ್ದೌಸ್ ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆಕೆ ವಿದೇಶಕ್ಕೆ ತೆರಳಿರುವ ಸಾಧ್ಯತೆ ಬಗ್ಗೆ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ನಿಂಬರ್ಗಿ ತಿಳಿಸಿದರು.