ಗಾಂಜಾ ಸೇವನೆ- ಮಾರಾಟ; 2 ತಿಂಗಳಲ್ಲಿ 53 ಪ್ರಕರಣ: ಎಸ್ಪಿ ನಿಂಬರ್ಗಿ
ಉಡುಪಿ, ಸೆ.28: ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾದ ಮಾದಕ ದ್ರವ್ಯ ವಿರೋಧಿ ಮಾಸಾಚರಣೆಯ ಪ್ರಯುಕ್ತ ಗಾಂಜಾ ಸೇವನೆ ಹಾಗೂ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಿದ್ದು, ಈ ಎರಡು ತಿಂಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 53 ಪ್ರಕರಣಗಳನ್ನು ದಾಖಲಿಸ ಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀ್ಷಕ ಲಕ್ಷ್ಮಣ್ ಬಿ.ನಿಂಬರ್ಗಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಗಾಂಜಾ ಸೇವನೆಗೆ ಸಂಬಂಧಿಸಿ 47 ಪ್ರಕರಣಗಳಲ್ಲಿ 47 ಮಂದಿಯನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಗಾಂಜಾ ಮಾರಾಟಕ್ಕೆ ಸಂಬಂಧಿಸಿ 6 ಪ್ರಕರಣಗಳಲ್ಲಿ ಒಟ್ಟು 14 ಮಂದಿಯನ್ನು ಬಂಧಿಸಿ ನಾಲ್ಕು ಲಕ್ಷ ರೂ. ವೌಲ್ಯದ 10.550ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಗಾಂಜಾ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ 2016ರಲ್ಲಿ 11, 2017ರಲ್ಲಿ 49 ಮತ್ತು 2018ರಲ್ಲಿ 91 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ವಿಭಿನ್ನ ದೂರುಗಳು: ಪತ್ನಿ ಹಾಗೂ ಪತ್ನಿ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಅಸಹಾಯಕ ಪತಿಯೊಬ್ಬರು ಇಂದು ಎಸ್ಪಿಗೆ ದೂರವಾಣಿ ಕರೆ ಮಾಡಿ ತನ್ನ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಎಸ್ಪಿ, ಗಂಡ ಹೆಂಡತಿ ಇಬ್ಬರು ಕೌನ್ಸಿಲ್ ಸೆಂಟರ್ಗೆ ಭೇಟಿ ನೀಡಿ ಆಪ್ತ ಸಮಾಲೋಚನೆ ಗೊಳಗಾಗಿ ಎಂದು ಸಲಹೆ ನೀಡಿದರು.
ಮರಳಿನ ವ್ಯಾಪಾರಕ್ಕಾಗಿ ಚಿಟ್ಫಂಡ್ನಲ್ಲಿ ಹಣ ಪಡೆದುಕೊಂಡಿದ್ದು, ಈಗ ಮರಳಿನ ಸಮಸ್ಯೆಯಿಂದ ಹಣ ಪಾವತಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಚಿಟ್ ಫಂಡ್ನವರು ಕಿರುಕುಳ ನೀಡುತ್ತಿದ್ದಾರೆ ಎಂದು ಕುಂದಾಪುರದ ವ್ಯಕ್ತಿಯೊಬ್ಬರು ದೂರಿದರು. ಮಲ್ಪೆಯಲ್ಲಿ ಶಾಲೆಗೆ ಹೋಗುತ್ತಿರುವ ಮಗ ಕಲಿಕೆಯಲ್ಲಿ ಸಾಕಷ್ಟು ಹಿಂದುಳಿದಿದ್ದು, ತಂದೆತಾಯಿಯ ಮಾತು ಕೇಳುತ್ತಿಲ್ಲ. ಆದುದರಿಂದ ತಾವು ಆ ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಉದ್ದೇಶಿಸಿ ಬುದ್ದಿಮಾತು ಹೇಳಬೇಕು ಎಂದು ಪೋಷಕರೊಬ್ಬರು ಮನವಿ ಮಾಡಿದರು.
ಪರವಾನಿಗೆ ಇದ್ದರೂ ನಗರದ ಸರ್ವಿಸ್ ಬಸ್ ನಿಲ್ದಾಣ ಸಮೀಪದ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಚಾಲಕ ರೊಬ್ಬರು ದೂರಿದರು. ಇದನ್ನು ಮಾತುಕತೆ ಮೂಲಕ ಬಗೆಹರಿಸುವುದಾಗಿ ಎಸ್ಪಿ ಭರವಸೆ ನೀಡಿದರು. ಮಂದರ್ತಿಯಲ್ಲಿರುವ ಬಾರ್ನಿಂದ ಕುಡುಕರು ಅಲ್ಲೇ ಎದುರಿನ ಅಶ್ವಥಕಟ್ಟೆಯಲ್ಲಿ ಬಂದು ಕುಳಿತುಕೊಳ್ಳುವುದರಿಂದ ಮಹಿಳೆಯ ರಿಗೆ ತೊಂದರೆ ಆಗುತ್ತಿದೆ ಎಂದು ಎರಡು ಪ್ರತ್ಯೇಕ ದೂರಿನ ಕರೆಗಳು ಬಂದವು.
ಕಾರ್ಮಿಕರ ಮಾಹಿತಿ ಸಂಗ್ರಹ: ಕೊಲ್ಲೂರು ವ್ಯಾಪ್ತಿಯಲ್ಲಿ ಹೊರರಾಜ್ಯದ ಕಾರ್ಮಿಕರಿಂದ ಆಗುತ್ತಿರುವ ತೊಂದರೆ ಕುರಿತ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಇಂತಹ ಕಾರ್ಮಿಕರ ಪೂರ್ಣ ಮಾಹಿತಿಯನ್ನು ಮಾಲಕರು ಸಂಗ್ರಹಿಸಿ ಸಮೀಪದ ಠಾಣೆಗಳಿಗೆ ನೀಡುವಂತೆ ಸೂಚನೆ ನೀಡಲಾಗುವುದು ಎಂದರು.
ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿರುವ ವರದಕ್ಷಿಣೆ ಪ್ರಕರಣದ ಆರೋಪಿ ಕೇರಳ ರಾಜ್ಯದ ಗಂಡ ವಿಚಾರಣೆಗೆ ಕೋರ್ಟ್ಗೆ ಹಾಜರಾಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಕರೆ ಮಾಡಿ ದೂರಿದರು. ಕೋರ್ಟ್ ಆರೋಪಿಗೆ ಸಮನ್ಸ್ ಅಥವಾ ವಾರೆಂಟ್ ಜಾರಿ ಮಾಡಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ಅದರಂತೆ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಹೇಳಿದರು.
ಶ್ರೀಕೃಷ್ಣ ಮಠದ ಸ್ವಾಗತ ಗೋಪುರದ ಬಳಿ ಭಿಕ್ಷುಕರ ಕಾಟ, ಕುಂದಾಪುರ ತಲ್ಲೂರಿನಲ್ಲಿ ಕುಡುಕರ ಸಮಸ್ಯೆ, ಕಲ್ಸಂಕ- ಕೃಷ್ಣ ಮಠ ರಸ್ತೆ ಮತ್ತು ಬ್ರಹ್ಮಗಿರಿ ಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಮಣಿಪಾಲದಲ್ಲಿ ವಾಹನಗಳ ಎಲ್ಇಡಿ ಲೈಟ್, ಶಂಕರನಾರಾಯಣ ಮತ್ತು ಮಂದರ್ತಿಯಲ್ಲಿ ಮಟ್ಕಾ ದಂಧೆ ಸೇರಿದಂತೆ ಒಟ್ಟು 22 ದೂರುಗಳು ಬಂದವು.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಉಡುಪಿಯ ಜೈಶಂಕರ್, ಕಾರ್ಕಳದ ಬೆಳ್ಳಿಯಪ್ಪ, ಕುಂದಾಪುರದ ಪಿ.ಬಿ.ದಿನೇಶ್, ಸೆನ್ ಪೊಲೀಸ್ ನಿರೀಕ್ಷಕ ಸೀತಾ ರಾಮ್, ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಪ್ರಕರಣ ದಾಖಲು
ಈ ಹಿಂದಿನ ಫೋನ್ ಇನ್ (ಆ.3)ನಿಂದ ಈವರೆಗೆ 49 ಮಟ್ಕಾ ಪ್ರಕರಣ ಗಳಲ್ಲಿ 51 ಮಂದಿಯನ್ನು ಮತ್ತು 13 ಜೂಜಾಟ ಪ್ರಕರಣಗಳಲ್ಲಿ 90 ಮಂದಿ ಯನ್ನು ಬಂಧಿಸಲಾಗಿದೆ. ಮೂರು ಅಕ್ರಮ ಮದ್ಯ ಮಾರಾಟ, 99 ಕೋಟ್ಪಾ, ಕುಡಿದು ವಾಹನ ಚಾಲನೆ 61, ಕರ್ಕಶ ಹಾರ್ನ್ 239, ವಾಹನ ಚಲಾನೆಯಲ್ಲಿ ಮೊಬೈಲ್ ಬಳಕೆ 156, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ 1478, ಅತಿ ವೇಗ 73, ಇತರ ವಾಹನ ಕಾಯಿದೆಗಳ ಉಲ್ಲಂಘನೆಯಲ್ಲಿ 4292 ಪ್ರಕರಣ ಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದರು.
ಭಾರತ್ ಬಂದ್: ಕೇಸ್ ವಾಪಾಸ್ಸಿಲ್ಲ
ಭಾರತ್ ಬಂದ್ ವೇಳೆ ನಡೆದ ಘರ್ಷಣೆ ಹಾಗೂ ಲಾಠಿ ಚಾರ್ಚ್ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕೇಸುಗಳನ್ನು ವಾಪಾಸ್ಸು ಪಡೆದುಕೊಂಡಿಲ್ಲ. ಈಗಾ ಗಲೇ ಪೊಲೀಸರು ಮೂರು ಹಾಗೂ ಪರಸ್ಪರ ಹಲ್ಲೆಗೆ ಸಂಬಂಧಿಸಿ ಎರಡೂ ರಾಜಕೀಯ ಪಕ್ಷದವರು ಒಟ್ಟು ಐದು ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಎಲ್ಲ ಪ್ರಕರಣಗಳಲ್ಲಿಯೂ ನ್ಯಾಯಾ ಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.