ಪೌರ ಕಾರ್ಮಿಕರ ಶ್ರಮದಿಂದ ಸ್ವಚ್ಛ ಪ್ರಶಸ್ತಿ: ಮೇಯರ್
ಮಂಗಳೂರು, ಸೆ.28: ದೇಶದ ಸ್ವಚ್ಛ ನಗರವಾಗಿ ಮಂಗಳೂರು ನಗರ ಪ್ರಶಸ್ತಿ ಪಡೆಯಲು ಪೌರ ಕಾರ್ಮಿಕರ ಶ್ರಮವೇ ಕಾರಣ ಎಂದು ಮೇಯರ್ ಭಾಸ್ಕರ ಕೆ. ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಇಂದು ನಗರದ ಪುರಭವನದಲ್ಲಿ ಆಯೋಜಿಸಲಾದ ಪೌರಕಾರ್ಮಿಕರ ದಿನಾಚಣೆಯನ್ನು ಉದ್ಘಾಟಿಸಿ ಮಾತನಾಡಿದರು. ನಗರದಲ್ಲಿ ಪೌರ ಕಾರ್ಮಿಕರು ಶುಚಿತ್ವವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ದೇಶದಲ್ಲಿ ಸ್ವಚ್ಛ ನಗರವಾಗಿ ಮಂಗಳೂರು ಗುರುತಿಸಿಕೊಂಡಿರುವುದು ಮಾತ್ರವಲ್ಲ ಪ್ರಶಸ್ತಿ ಪಡೆಯುವುದು ಸಾಧ್ಯವಾಗಿದೆ ಎಂದವರು ಹೇಳಿದರು.
ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು ತಮ್ಮ ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಕೊಬೇಕು ಎಂದು ಅವರು ಹೇಳಿದರು.
ಉಪಮೇಯರ್ ಮುಹಮ್ಮದ್ ಕುಂಜತ್ಬೈಲ್ ಮಾತನಾಡಿ, ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಸರಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದರು.
ಈ ಸಂದರ್ಭ ನಿವೃತ್ತ ಪೌರಕಾರ್ಮಿಕರಾದ ಗಣೇಶ, ಬೇಬಿ, ಭಾಸ್ಕರ, ಅಂಗಾರ, ಶೀನ , ಸುಮತಿ, ಸುಂದರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿದ ಪೌರಕಾರ್ಮಿಕ ಮಕ್ಕಳನ್ನು ಅಭಿನಂದಿಸಲಾಯಿತು.
ಸಚೇತಕರಾದ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯರಾದ ಅಪ್ಪಿಲತಾ, ಕವಿತಾ ವಾಸು, ಸಬಿತಾ ಮಿಸ್ಕಿತ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್ ಡಿಸೋಜ, ಅಶೋಕ್ ಡಿಕೆ ಹಾಗೂ ಪಾಲಿಕೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.