ಗಾಂಧಿ ಅಧ್ಯಯನ ಕೇಂದ್ರದಲ್ಲಿ ‘ಗಾಂಧಿ-150’ ಕಾರ್ಯಕ್ರಮ
ಉಡುಪಿ, ಸೆ.28: ಎಂಜಿಎಂ ಕಾಲೇಜು, ಎಂಜಿಎಂ ಪದವಿ ಪೂರ್ವ ಕಾಲೇಜು ಹಾಗೂ ಗಾಂಧಿ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಅ.2ರಂದು ಗಾಂಧಿ ಜಯಂತಿ ಹಾಗೂ ‘ಗಾಂಧಿ-150’ ಕಾರ್ಯಕ್ರಮಗಳು ನಡೆಯಲಿವೆ ಎಂದು ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ತಿಳಿಸಿದ್ದಾರೆ.
ಅ.2ರಂದು ಬೆಳಗ್ಗೆ 9 ರಿಂದ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಂದ ರಾಮ್ಧುನ್ ಭಜನೆ ಹಾಗೂ ಸರ್ವಧರ್ಮ ಸಮಭಾವದ ಪ್ರಾರ್ಥನೆ ನಡೆಯಲಿದೆ. ಬಳಿಕ ಬೆಳಗ್ಗೆ 10 ರಿಂದ ಸಭಾ ಕಾರ್ಯಕ್ರಮ ಹಾಗೂ ಗಾಂಧಿ-150 ವಿಶೇಷ ಉಪನ್ಯಾಸ ನಡೆಯಲಿದೆ.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಹೆಯ ಜಿಯೋಪೋಲಿಟಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ನಂದಕಿಶೋರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ ಉಪಸ್ಥಿತ ರಿರುವರು ಎಂದು ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಟಿಎಂಎ ಪೈ ಶಿಕ್ಷಣ ಕಾಲೇಜು: ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಹಯೋಗದಲ್ಲಿ ಗಾಂಧೀಜಿ-150 ಕಾರ್ಯಕ್ರಮವನ್ನು ಆಯೋಜಿಸಿದೆ. ‘ಗಾಂಧಿಸ್ತವ-ಕನ್ನಡ ಕವಿಗಳು ಕಂಡ ಗಾಂಧಿ’ ಎಂಬ ಗಾನ ವ್ಯಾಖ್ಯಾನ ಕಾರ್ಯಕ್ರಮವನ್ನು ಗಾಯಕ ಎಚ್.ಚಂದ್ರಶೇಖರ ಕೆದ್ಲಾಯ ಹಾಗೂ ಡಾ.ಮಹಾಬಲೇಶ್ವರ ರಾವ್ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.