ಮೂಡುಬಿದಿರೆ: ಭಗ್ನ ಪ್ರೇಮಿಯಿಂದ ಚೂರಿ ಇರಿತ; ಗಂಭೀರ ಗಾಯಗೊಂಡಿದ್ದ ಯುವತಿ ಮೃತ್ಯು
ಯುವಕ ಆತ್ಮಹತ್ಯೆ
ಮೂಡುಬಿದಿರೆ, ಸೆ.28: ಮೂಡುಬಿದಿರೆ ಪುರಸಬಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಭಗ್ನ ಪ್ರೇಮಿ ಯುವಕನೋರ್ವ ಯುವತಿ ಯೊಬ್ಬಳನ್ನು ಮಾರಾಕಾಯುಧಗಳಿಂದ ಹಲ್ಲೆ ನಡೆಸಿದ್ದು ಗಾಯಗೊಂಡ ಯುವತಿ ಮೃತಪಟ್ಟಿದ್ದು, ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರು ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಪ್ರಾಂತ್ಯದ ಸಿಕ್ವೇರ ಕಂಪೌಂಡ್ನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಮೇಶ್ ಎಂಬವರ ಪುತ್ರಿ ಚರಿಷ್ಮಾ ಆರ್. ಕರ್ಕೇರ (21) ಏಕಮುಖ ಪ್ರೇಮಕ್ಕೆ ಬಲಿಯಾದ ಯುವತಿ. ಬಜಾಲ್ ತಂದೊಳಿಗೆ ನಿವಾಸಿ ಲೋಹಿತ್ ಯಾನೆ ಮುನ್ನ (22) ಆತ್ಮಹತ್ಯೆ ಮಾಡಿಕೊಂಡ ಕೊಲೆ ಆರೋಪಿ.
ಪೊಲೀಸ್ ಮಾಹಿತಿ: ಮಂಗಳೂರಿನ ಡ್ಯಾನ್ಸ್ ತಂಡವೊಂದರಲ್ಲಿ ನೃತ್ಯಪಟುವಾಗಿದ್ದ ಚರಿಷ್ಮಾಳನ್ನು ಲೋಹಿತ್ ಕಳೆದ ಕೆಲವು ವರ್ಷಗಳಿಂದ ಏಕಮುಖವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆತನ ಪ್ರೇಮ ನಿವೇದಕ್ಕೆ ಚರಿಷ್ಮಾ ಒಪ್ಪಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಶುಕ್ರವಾರ ಚರಿಷ್ಮಾ ಒಂಟಿಯಾಗಿ ಮನೆಯಲ್ಲಿ ರುವುದನ್ನು ಖಚಿತಪಡಿಸಿಕೊಂಡ ಆರೋಪಿ ಲೋಹಿತ್ ಮನೆಯೊಳಗೆ ನುಗ್ಗಿದ್ದಾನೆ. ಚರಿಷ್ಮಾರ ಕುತ್ತಿಗೆಗೆ ಚಾಕುವಿನಿಂದ ಇರಿದು ತಲೆಗೆ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಚರಿಷ್ಮಾ ಬೊಬ್ಬೆ ಹಾಕುತ್ತಾ ಮನೆಯಿಂದ ಹೊರಗೋಡಿ ಬಂದು ಬಿದ್ದಿದ್ದಾರೆ. ಅಷ್ಟರಲ್ಲಿ ಮನೆಯೊಳಗಿನ ಕೋಣೆಯೊಂದಕ್ಕೆ ನುಗ್ಗಿದ ಆರೋಪಿ ಲೋಹಿತ್ ಸೀರೆಯೊಂದನ್ನು ಬಳಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ ಚರಿಷ್ಮಾಳನ್ನು ಮನೆಯ ಹತ್ತಿರದವರು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿದೆ ಅವರು ಕೊನೆಯುಸಿರೆಳೆದಿದ್ದಾರೆ.
ದೂರದ ಸಂಬಂಧಿಯಾಗಿದ್ದ ಲೋಹಿತ್ ಈ ಹಿಂದೆ ಚರಿಷ್ಮಾಳ ತಾಯಿ ಚಂಪಾವತಿ ಬಳಿ ಪೋನ್ ಕರೆಯ ಮೂಲಕ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದ ನೆನ್ನಲಾಗಿದೆ. ಈ ಸಂದರ್ಭ ಅವರು ಸಮಯ ಬಂದಾಗ ನೋಡುವ ಎಂದಿದ್ದರು. ಈ ವಿಚಾರವನ್ನು ಚಂಪಾವತಿ ಮಗಳಲ್ಲಿ ತಿಳಿಸಿದ್ದರೆನ್ನಲಾಗಿದೆ. ಆದರೆ ಆಕೆ ಲೋಹಿತ್ನನ್ನು ನಿರಾಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲೋಹಿತ್ ವೃತ್ತಿಯಲ್ಲಿ ಎ.ಸಿ. ಮ್ಯೆಕಾನಿಕ್ ಆಗಿದ್ದ.
ಘಟನಾ ಸ್ಥಳಕ್ಕೆ ಡಿಸಿಪಿ ಉಮಾಪ್ರಶಾಂತ್, ಎಸಿಪಿ ರಾಜೇಂದ್ರ, ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಉಪನಿರೀಕ್ಷಕ ದೇಜಪ್ಪ, ಕ್ರೈಂ ವಿಭಾಗದ ಪೊಲೀಸ್ ಆನಂದ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.