'ಕೃಷಿ ಸಾಲ ಮರುಪಾವತಿಗೆ ಬ್ಯಾಂಕ್ನಿಂದ ನೋಟೀಸು ನೀಡುವುದಿಲ್ಲ'
ಲೀಡ್ ಬ್ಯಾಂಕ್ ಮೆನೇಜರ್ ರಿಂದ ರೈತರಿಗೆ ಭರವಸೆ
ಪುತ್ತೂರು, ಸೆ. 28: ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯು ಇತ್ಯರ್ಥವಾಗುವ ತನಕ ಯಾವುದೇ ಸಾಲಗಾರ ರೈತರಿಗೆ ಕೃಷಿ ಸಾಲ ಮರು ಪಾವತಿಗೆ ನೋಟೀಸು ನೀಡದಂತೆ ಜಿಲ್ಲೆಯ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದ್ದು, ನೋಟೀಸು ಬಂದಲ್ಲಿ ರೈತರು ಅದನ್ನು ಪರಿಗಣಿಸಬೇಕಾಗಿಲ್ಲ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಫ್ರಾನ್ಸಿಸ್ ಮತ್ತು ಸಿಂಡಿಕೇಟ್ ಬ್ಯಾಂಕ್ನ ಮಂಗಳೂರು ಕ್ಷೇತ್ರೀಯ ಉಪ ಪ್ರಬಂಧಕ ಶಿವಸ್ವಾಮಿ ಶುಕ್ರವಾರ ರೈತರಿಗೆ ಭರವಸೆ ನೀಡಿದ್ದಾರೆ.
ಕೃಷಿ ಸಾಲ ಮರುಪಾವತಿಸುವಂತೆ ಸವಣೂರು ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳು ರೈತರಿಗೆ ನೊಟೀಸು ನೀಡಿರುವ ಹಿನ್ನಲೆಯಲ್ಲಿ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಸಮಿತಿ ವತಿಯಿಂದ ಸವಣೂರು ಸಿಂಡಿಕೇಟ್ ಬ್ಯಾಂಕ್ಗೆ ಬೀಗಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಕಚೇರಿಯಲ್ಲಿ ರೈತ ಸಂಘದ ಮುಖಂಡರ ಜೊತೆ ಅವರು ಮಾತುಕತೆ ನಡೆಸಿದರು.
ಹಳೆಯ ಸಾಲಗಳನ್ನು ಮರುಪಾವತಿ ಮಾಡದೇ ಇದ್ದರೆ ಎಲ್ಲಾ ಬ್ಯಾಂಕುಗಳಿಗೂ ಸಮಸ್ಯೆಯಾಗುತ್ತದೆ. ನೀವು ಹಿಂದೆ ತೆಗೆದ ರೂ.3 ಲಕ್ಷ ಸಾಲ ಅವಧಿ ಮೀರಿದರೆ ಬಡ್ಡಿ ಸೇರಿ ಹೆಚ್ಚಾಗುತ್ತದೆ. ಪ್ರಸ್ತುತ ರೈತರು ಈ ಹಿಂದೆ ತೆಗೆದ ಸಾಲ ಅವಧಿಮೀರಿದ್ದರೆ ಅಂತಹ ರೈತರಿಗೆ ಮೂಲಸಾಲದ ಹಣದೊಂದಿಗೆ ಸ್ವಲ್ಪ ಹೆಚ್ಚು ಹಣವನ್ನು ಏಕಗಂಟಿನಲ್ಲಿ ಪಾವತಿಸಿದರೆ ಉಳಿದ ಬಡ್ಡಿಹಣವನ್ನು ಮನ್ನಾ ಮಾಡುವ ಒನ್ ಟೈಮ್ ಸಿಸ್ಟಮ್ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಡಕೆ ಕೊಳೆರೋಗದಿಂದ ರೈತವರ್ಗದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದು, ಇದರೊಂದಿಗೆ ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯ ಇತ್ಯರ್ಥವಾಗುವ ತನಕ ಯಾವುದೇ ಬ್ಯಾಂಕ್ಗಳು ಇನ್ನುಮುಂದೆ ರೈತನಿಗೆ ಕೃಷಿಸಾಲ ಮರುಪಾವತಿಗೆ ನೋಟೀಸು ನೀಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರೈತ ಸಂಘಟನೆಯ ಮುಖಂಡರಾದ ಜಿಲ್ಲಾ ರೈತಸಂಘ ಹಸಿರುಸೇನೆಯ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು, ಗೌರವ ಸಲಹೆಗಾರ ಮಹಾಬಲ ಭಟ್, ಉಪಾಧ್ಯಕ್ಷ ಇಡ್ಯಾಡಿ ಧರ್ಣಪ್ಪ ಗೌಡ, ಪ್ರ.ಕಾರ್ಯದರ್ಶಿ ಹೊನ್ನಪ್ಪ ಗೌಡ, ಕಡಬ ತಾಲೂಕು ಶಾಖೆಯ ಅಧ್ಯಕ್ಷ ವಿಕ್ಟರ್ ಮಾರ್ಲಿನ್ ಮುಖಂಡರಾದ ಸುದರ್ಶನ ಕಂಪ, ವನಿತಾ ಕೆ ಮತ್ತಿತರರು ಮಾತನಾಡಿ ಸವಣೂರು ಸಿಂಡಿಕೇಟ್ ಬ್ಯಾಂಕಿನಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಈ ಬ್ಯಾಂಕಿನಿಂದ ಸಾಲ ಪಡೆದ ರೈತರಿಗೆ ಲೀಗಲ್ ನೋಟೀಸು ಕಳುಹಿಸುತ್ತಿದ್ದಾರೆ. ದೂರವಾಣಿ ಕರೆ ಮಾಡಿ ಮನೆ ಮಹಿಳೆಯರನ್ನು ಬೆದರಿಸುತ್ತಿದ್ದಾರೆ. ಸಾಲಕ್ಕೆ ಜಾಮೀನು ಹಾಕಿದ ವ್ಯಕ್ತಿಗಳಿಗೂ ಬೆದರಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ರೂ. 10ಲಕ್ಷಕ್ಕಿಂತ ಮೇಲ್ಪಟ್ಟು ಸಾಲ ಇರುವ ಶ್ರೀಮಂತರಿಗೆ ನೋಟೀಸು ಕಳುಹಿಸುತ್ತಿಲ್ಲ. ಬಡವರಿಗೆ ಮಾತ್ರ ನೋಟೀಸು ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕ್ಗಳು ನೋಟೀಸು ನೀಡಿ ರೈತರಿಗೆ ತೊಂದರೆ ನೀಡುತ್ತಿರುವುದನ್ನು ವಿರೋಧಿಸಿ ಬ್ಯಾಂಕ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ರೈತ ಸಂಘದ ವತಿಯಿಂದ ತೀರ್ಮಾನಿಸಲಾಗಿತ್ತು. ಇದೀಗ ಅಧಿಕಾರಿಗಳು ಆಗಮಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿರುವ ಕಾರಣ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಥಿಕ ಸಾಕ್ಷರತಾ ಸಮಾಲೋಚಕ ಸತೀಶ್ ಅತ್ತಾವರ ಉಪಸ್ಥಿತರಿದ್ದರು.