'ಆರೋಗ್ಯ ಕ್ಶೇತ್ರದಲ್ಲಿ ಔಷಧ ತಜ್ಞರ ಪಾತ್ರ ನಿರ್ಣಾಯಕ'
ವಿಶ್ವ ಔಷಧ ತಜ್ಞರ ದಿನವನ್ನು ಉದ್ಘಾಟಿಸಿ ಡಾ.ಎಂ ಅಬ್ದುಲ್ ಸಲಾಮ್
ಕೊಣಾಜೆ, ಸೆ. 28: ಜನರ ಆರೋಗ್ಯವನ್ನು ಕಾಪಾಡುವಲ್ಲಿ ಔಷಧ ತಜ್ಞರ ಪಾತ್ರ ಬಹು ಮುಖ್ಯವಾಗಿದ್ದು, ಅವರು ಆರೋಗ್ಯ ವೃತ್ತಿಪರರೊಂದಿಗೆ ಸೇರಿಕೊಂಡು ಮಾದರಿ ರೀತಿಯಲ್ಲಿ ಸೇವೆ ಸಲ್ಲಿಸಬೇಕೆಂದು ಪಿ.ಎ. ಶೈಕ್ಷಣಿಕ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ ಅಬ್ದುಲ್ ಸಲಾಂ ಹೇಳಿದರು.
ಅವರು ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಹಮ್ಮಿಕೊಂಡಿರುವ ‘ವಿಶ್ವ ಔಷಧ ತಜ್ಞರ ದಿನ’ವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಎ ಆರ್ ಶಬರಾಯ ಮಾತನಾಡಿ ಔಷಧಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಸಾಧಿಸಲು ವೃತ್ತಿ ನಿಷ್ಠೆ, ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್ನ ಪ್ರೊ. ಡಾ.ಮಂತನ್ ಜೊನಾಡಿಯ ಮಾತನಾಡಿ ಔಷಧಿ ವಿಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳು ಹಾಗೂ ಔಷಧ ತಜ್ಞರ ಕರ್ತವ್ಯಗಳ ಬಗ್ಗೆ ತಿಳಿಸಿದರು. ಪಿ.ಎ.ಎಜ್ಯುಕೇಶನಲ್ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಇಬ್ರಾಹಿಂ ಅಧ್ಯಕ್ಷತೆ ವಹಿಸಿ, ಮಾತನಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಔಷಧ ತಜ್ಞರು ನಿರ್ವಹಿಸುತ್ತಿರುವ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಸ್ವಾಗತಿಸಿ ಪ್ರೊ. ವಿಜೇತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಪ್ರೊ. ನಿಶ್ಮಿತಾ ವಂದಿಸಿದರು.