ಜೆಪ್ಪುಮಹಾಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯ: ಸ್ಥಳೀಯರಿಂದ ಧರಣಿ
ಮಂಗಳೂರು, ಸೆ.29: ಜೆಪ್ಪುಮಹಾಕಾಳಿಪಡ್ಪುವಿನ ಸಮೀಪ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ(ತುರವೇ), ಮಹಾಕಾಳಿಪಡ್ಪು ನಿರ್ಮಲ ನಗರದ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸ್ಥಳೀಯ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಮಹಾಕಾಳಿಪಡ್ಪುವಿನ ರೈಲ್ವೆ ಗೇಟ್ ಬಳಿ ಸ್ಥಳೀಯರು ಧರಣಿ ನಡೆಸಿದರು.
ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ವಲಯ ರೈಲ್ವೆ ಗ್ರಾಹಕರ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಅಹ್ಮದ್ ಬಾವ ಬಜಾಲ್, ಮಹಾಕಾಳಿಪಡ್ಪುವಿನ ಸಮೀಪ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ 1986ರಿಂದಲೇ ಹೋರಾಟಗಳು ನಡೆಯುತ್ತಿವೆ. ಆದರೆ ಇದುವರೆಗೂ ಅದಕ್ಕೆ ಪ್ರತಿಫಲ ಸಿಕ್ಕಿಲ್ಲ. ಆದ್ದರಿಂದ ಈ ಸಮಸ್ಯೆಗೆ ಕೂಡಲೇ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಿ ಸ್ಥಳೀಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಮಹಾಕಾಳಿಪಡ್ಪು ರೈಲ್ವೆ ಕೇಳಸೇತುವೆ ನಿರ್ಮಾಣಕ್ಕೆ ಡಿವಿಷನ್ ರೈಲ್ವೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ 10 ಕೋ.ರೂ.ನ ಅಂದಾಜುಪಟ್ಟಿ ಸಲ್ಲಿಕೆಯಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆ ತಕ್ಷಣ ಗಮನಹರಿಸಿ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮನಪಾದ ಎದುರೇ ಪ್ರತಿಭಟನೆ ನಡೆಸಲಾಗುವುದು ಎಂದು ಅಹ್ಮದ್ ಬಾವ ಎಚ್ಚರಿಸಿದರು.
ಧರಣಿಯ ನೇತೃತ್ವ ವಹಿಸಿದ್ದ ತುರವೇ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಿರಾಜ್ ಅಡ್ಕರೆ, ಪ್ರಶಾಂತ್, ಆನಂದ್ ಅಮೀನ್ ಅಡ್ಯಾರ್, ರವಿ ಶೆಟ್ಟಿ, ಜ್ಯೋತಿಕಾ ಜೈನ್, ಅಶೋಕ್ ಮೊದಲಾದವರು ಮಾತನಾಡಿದರು.