ಯಡಿಯೂರಪ್ಪ 'ಪಾಪ ಪಾಂಡು': ಐವನ್ ಡಿಸೋಜ ವ್ಯಂಗ್ಯ
ಮಂಗಳೂರು, ಸೆ.29: ಬಿಜೆಪಿ ತನ್ನೊಳಗಿನ ಭಿನ್ನಮತದಿಂದ ನಲುಗಿ ಹೋಗಿದ್ದು, ಅದನ್ನು ನಿಭಾಯಿಸಲಾಗದ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಸ್ಥಿತಿ 'ಪಾಪ ಪಾಂಡು' ಥರ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವ್ಯಂಗ್ಯವಾಡಿದ್ದಾರೆ.
ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ನಾಲ್ಕು ಬಾರಿ ಪ್ರಯತ್ನಿಸಿ ವಿಫಲವಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರಷ್ಟೇ ಇಂತಹ ದುಸ್ಸಾಹಸಕ್ಕೆ ಕೈಹಾಕುತ್ತಾರೆ ಎಂದರು.
ಬಿಜೆಪಿಯಲ್ಲಿ ಅನಂತ್ ಕುಮಾರ್, ಆರ್.ಅಶೋಕ್, ಡಿ.ವಿ.ಸದಾನಂದ ಗೌಡರ ಬಣ ರಾಜಕೀಯ ಮೇಳೈಸುತ್ತಿದೆ. ಅದನ್ನು ಹತ್ತಿಕ್ಕಲಾಗದ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಹಗಲುಕನಸು ಕಾಣುತ್ತಿದ್ದಾರೆ. ಆದರೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕರೇ ಬಿಡುವುದಿಲ್ಲ. ಈ ಬಗ್ಗೆ ಅರಿವಿಲ್ಲದ ಯಡಿಯೂರಪ್ಪರ ಬಗ್ಗೆ ಕನಿಕರವಿದೆ ಎಂದು ಐವನ್ ಡಿಸೋಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗುರುರಾಜ್, ನಾಗೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.