ಉಡುಪಿ ಸರಕಾರಿ ಆಸ್ಪತ್ರೆ ಖಾಸಗಿಯವರಿಗೆ ಹಸ್ತಾಂತರಿಸದಂತೆ ಆರೋಗ್ಯ ಸಚಿವರಿಗೆ ಮನವಿ
ಉಡುಪಿ, ಸೆ.29: ಉಡುಪಿಯ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದನ್ನು ತಡೆಹಿಡಿಯುವಂತೆ ಒತ್ತಾಯಿಸಿ ಶನಿವಾರ ಉಡುಪಿಗೆ ಆಗಮಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಅವರಿಗೆ ಆಸ್ಪತ್ರೆ ಉಳಿವಿಗಾಗಿ ನಾಗರಿಕರ ಒಕ್ಕೂಟ ಮನವಿ ಸಲ್ಲಿಸಿತು.
ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆಯನ್ನು ಬಿಆರ್ಎಸ್ ಸಂಸ್ಥೆಗೆ 200 ಹಾಸಿಗೆಯ ಕೂಸಮ್ಮ ಶಂಭು ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ 400 ಹಾಸಿಗೆಯ ಸೆಂಟರ್ ಆಫ್ ಎಕ್ಸಲೆನ್ಸ್ ಆಸ್ಪತ್ರೆಯನ್ನಾಗಿಸಿ ದೈನಂದಿನ ನಿರ್ವಹಣೆಗೆ ವಹಿಸಿಕೊಡಲಾಗಿದೆ. ಇದರ ವಿರುದ್ಧ ಉಡುಪಿಯ ನಾಗರಿಕರು ಹೋರಾಟಗಳನ್ನು ನಡೆಸಿದ್ದು ಇದಕ್ಕೆ ಸರಕಾರದ ಸ್ಪಂದಿಸದಿದ್ದಾಗ ಈ ಕ್ರಮವನ್ನು ಪ್ರಶ್ನಿಸಿ ಉಡುಪಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ 2018ರ ಸೆ.22ರಂದು ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆಯ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ರೋಗಿಯನ್ನು ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಗೆ ಸ್ಥಳಾಂತರಿಸಿದೆ. ಅಲ್ಲದೆ ಅಲ್ಲಿನ ವೈದ್ಯರನ್ನು 2 ತಿಂಗಳ ನಿಯೋಜನೆ ಮೇರೆಗೆ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಿದೆ.
ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲ ಸಾಹೇಬ್ ಬಡ ಜನರಿಗೆ ಉಚಿತ ಆರೋಗ್ಯ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಸರಕಾರಿ ಆಸ್ಪತ್ರೆಯನ್ನು ದಾನವಾಗಿ ನೀಡಿದೆ. ಆದರೆ ಈ ಹಿಂದಿನ ಸರಕಾರ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡು ಖಾಸಗಿ ಸಂಸ್ಥೆಗೆ ಹಾಜಿ ಅಬ್ದುಲ್ಲಾರಿಂದ ದಾನವಾಗಿ ಬಂದ ಜಾಗವನ್ನು ನೂತನ ಆಸ್ಪತ್ರೆಯನ್ನು ನಿರ್ಮಿಸಲು ನೀಡಿದೆ. ಇದು ದಾನಿ ಹಾಜಿ ಅಬ್ದುಲ್ಲರಿಗೆ ಮಾಡಿದ ಅವಮಾನ ಎಂದು ಮನವಿಯಲ್ಲಿ ದೂರಲಾಗಿದೆ.
ಆದುದರಿಂದ ಪ್ರಸ್ತುತ ಬಿಆರ್ಎಸ್ ಸಂಸ್ಥೆ ನಿರ್ಮಿಸಿರುವ ಕೂಸಮ್ಮ ಶಂಭು ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಮುಂದೆ ನಿರ್ಮಿಸಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಅಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಬಡವರಿಗೆ ತೊಂದರೆಯಾಗದಂತೆ ನಿರ್ಣಯವನ್ನು ಕೈಗೊಳಬೇಕೆಂದು ಒಕ್ಕೂಟವು ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಶಾಸಕ ಕೆ.ರಘುಪತಿ ಭಟ್, ಒಕ್ಕೂಟದ ಪ್ರಮುಖರಾದ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಯೋಗೀಶ್ ಶೇಟ್, ಹಾಜಿ ಅಬ್ದುಲ್ಲಾರ ಸಂಬಂಧಿ ಇಕ್ಬಾಲ್ ಮನ್ನಾ ಮೊದಲಾದವರು ಉಪಸ್ಥಿತರಿದ್ದರು.