ಮಂಗಳೂರು: ಬಿಜೆಪಿಯಿಂದ ‘ಸರ್ಜಿಕಲ್ ಸ್ಟ್ರೈಕ್ ಶೌರ್ಯ’ ದಿನಾಚರಣೆ
ಮಂಗಳೂರು, ಸೆ.29: ನಗರದ ಕದ್ರಿಯ ಹುತಾತ್ಮ ಯೋಧರ ಸ್ಮಾರಕದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಶನಿವಾರ ‘ಸರ್ಜಿಕಲ್ ಸ್ಟ್ರೈಕ್ ಶೌರ್ಯ ದಿನಾಚರಣೆ’ ನಡೆಯಿತು.
ಭಾರತೀಯ ಸೇನೆಯ ಕಮಾಂಡೋಗಳು ಎರಡು ವರ್ಷದ ಹಿಂದೆ ಸೆ.29ರಂದು ಪಾಕಿಸ್ತಾನದ ಗಡಿ ದಾಟಿ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಹತ್ಯೆಗೈದು ಉಗ್ರರ ಕ್ಯಾಂಪ್ಗಳನ್ನು ಧ್ವಂಸಗೊಳಿಸಿದ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಕರೆಯಂತೆ ಈ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಸರ್ಜಿಕಲ್ ಸ್ಟ್ರೈಕ್ ಭಾರತೀಯ ಸೇನೆಯ ಯೋಧರ ಆತ್ಮಸ್ಥೈರ್ಯ ಹೆಚ್ಚಿಸಿದರೆ, ಪಾಕಿಸ್ತಾನ ಮತ್ತಿತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. ದೇಶದ ಜನರು ಸರ್ಜಿಕಲ್ ಸ್ಟ್ರೈಕ್ನ್ನು ಸಂಭ್ರಮಿಸಿದ್ದಾರೆ. ದಾಳಿಯಲ್ಲಿ ಭಾಗವಹಿಸಿದ ಯೋಧರ ಕಾಲಿಗೆ ಸಣ್ಣ ಗಾಯ ಹೊರತುಪಡಿಸಿ ಭಾರತೀಯ ಸೈನ್ಯದ ಯಾವೊಬ್ಬ ಸೈನಿಕನ ಸಾವು -ನೋವು ಆಗಿಲ್ಲ. 29ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿರುವುದು ಗಮನಾರ್ಹ. ಇಸ್ರೇಲ್, ಅಮೇರಿಕ ನಡೆಸುತ್ತಿದ್ದ ಇಂತಹಾ ದಾಳಿಯನ್ನು ಭಾರತೀಯ ಸೈನ್ಯವೂ ಯಶಸ್ವಿಯಾಗಿ ನಡೆಸಿದೆ. ಇದು ಸೈನ್ಯ ಮತ್ತು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದರು.
ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ ಅಧ್ಯಕ್ಷ ವಿಕ್ರಮ್ ದತ್ತಾ, ನಿವೃತ್ತ ಯೋಧ ಕರ್ನಲ್ ಶರತ್ ಭಂಡಾರಿ, ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರು, ಕಾರ್ಪೊರೇಟರ್ಗಳಾದ ರೂಪಾ ಡಿ. ಬಂಗೇರ, ಸಧೀರ್ ಶೆಟ್ಟಿ ಕಣ್ಣೂರು, ಜಯಂತಿ ಆಚಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಪ್ರಮುಖರಾದ ಪ್ರಭಾಮಾಲಿನಿ, ರವಿಚಂದ್ರ, ವಿನಯ್ ಎಲ್. ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ ಪಾಲ್ಗೊಂಡಿದ್ದರು.