ವಿಶ್ವ ಹೃದಯ ದಿನ: ಕೆಎಂಸಿಯಿಂದ ‘ಗಾರ್ಡಿಯನ್ಸ್ ಆಫ್ ಹಾರ್ಟ್’ ಅಭಿಯಾನಕ್ಕೆ ಚಾಲನೆ
ಮಂಗಳೂರು, ಸೆ. 29: ಹೃದಯ ರಕ್ತನಾಳಗಳ ರೋಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ವಿಶ್ವ ಹೃದಯ ದಿನದ ಅಂಗವಾಗಿ‘ ಗಾರ್ಡಿಯನ್ಸ್ ಆಫ್ ಹಾರ್ಟ್’(ಹೃದಯದ ರಕ್ಷಕರು) ಅಭಿಯಾನವನ್ನು ಶನಿವಾರ ಆರಂಭಿಸಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅಭಿಯಾನದ ಲೋಗೋ ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಕೆಎಂಸಿ ಹೃದಯರೋಗ ಶಾಸ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್, ವಿಶ್ವ ಹೃದಯ ದಿನ ಮತ್ತು ಶಿಕ್ಷಕರ ದಿನಗಳ ಅನನ್ಯ ಸಹಭಾಗಿತ್ವವಾದ ಅಭಿಯಾನ ಇದಾಗಿದ್ದು, 25,000 ಹಾರ್ಟ್ ಸ್ಮಾರ್ಟ್ ಟೀಚರ್ಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಇವರು ಯುವ ಪೀಳಿಗೆಯಲ್ಲಿ ಹೃದಯರಕ್ತನಾಳಗಳ ರೋಗ(ಸಿವಿಡಿ) ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದರು.
ವಿಜಯವಾಡ, ಮಂಗಳೂರು, ಗೋವಾ, ಜೈಪುರ್ ಮತ್ತು ದ್ವಾರಕ(ಹೊಸದಿಲ್ಲಿ) ಮುಂತಾದ ಕಡೆಗಳಲ್ಲಿರುವ ಮಣಿಪಾಲ್ ಸಂಸ್ಥೆಯ ವಿವಿಧ ಕೇಂದ್ರಗಳಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಡಾ.ಪದ್ಮನಾಭ ಕಾಮತ್ ತಿಳಿಸಿದರು.
ಶಾಲೆಗಳಲ್ಲಿ ಕೆಲವೊಮ್ಮೆ ಸಂಭವಿಸುವ ಗಂಭೀರ ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬ ನೆಲೆಯಲ್ಲಿ ಪರಿಣತ ತಜ್ಞರಿಂದ ಸೂಕ್ತ ಮಾಹಿತಿ ಒದಗಿಸಲಾಯಿತು.
ಹೃದಯರೋಗ ತಜ್ಞ ಡಾ.ಎಂ.ಎನ್ ಭಟ್, ಮಂಗಳೂರು ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಡಾ.ಜೀದು ರಾಧಾಕೃಷ್ಣನ್ ಉಪಸ್ಥಿತರಿದ್ದರು. ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.