ಸ್ವಚ್ಛತಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ: ಮಧುಕಿರಣ್
ಮಂಗಳೂರು, ಸೆ.29: ಪ್ರತಿಯೊಬ್ಬ ವ್ಯಕ್ತಿಯು ಪರಿಸರದ ಸ್ವಚ್ಛತೆಯ ಅರಿವು ಬಂದಾಗಲೇ ಸ್ವಚ್ಛ ಭಾರತ ಅಭಿಯಾನ ಸಫಲವಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಮಧುಕಿರಣ್ ಅಭಿಪ್ರಾಯಪಟ್ಟರು.
ಕಾವೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶ, ವಿದ್ಯಾರ್ಥಿ ಪರಿಷತ್, ಜಾಗೃತಿ ಗ್ರಾಹಕ ವೇದಿಕೆ ಹಾಗೂ ಇಕೋ ಕ್ಲಬ್ಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ವಾರ್ತಾ ಸೇವೆಯ ಉಪನಿರ್ದೇಶಕ ಕೆ.ಪಿ.ರಾಜೀವನ್ ಮಾತನಾಡಿ, ಸ್ವಚ್ಛತೆಯ ಕಾರ್ಯಕ್ರಮದಿಂದ ಪ್ರತಿಯೊಬ್ಬ ವಿದ್ಯಾರ್ಥಿ ಮಾಹಿತಿ ಹೊಂದುವುದರ ಜೊತೆಗೆ ಅದನ್ನು ಇತರರಿಗೂ ನೀಡಬೇಕು. ಸ್ವಚ್ಛತೆಯು ಎನ್ನುವುದು ಹೃದಯದಿಂದ ಬರಬೇಕು. ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ ವಾಗಬೇಕೆಂದು ತಿಳಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಯು.ತಾರಾರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೂರು ಸಬ್ಇನ್ಸ್ಪೆಕ್ಟರ್ ರೋಜಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಚ್ಛ ಭಾರತದ ಕುರಿತು ಚಿತ್ರ ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಛಾಯಾಚಿತ್ರ ಪದರ್ಶನ ಮತ್ತು ಜಾಗೃತಿ ಜಾಥಾವನ್ನು ನಡೆಸಲಾಯಿತು. ವಿದ್ಯಾರ್ಥಿಗಳನ್ನು ಒಳಗೊಂಡ ಜಾಥಾ ಕಾವೂರು ಜಂಕ್ಷನ್ನಿಂದ ಪ್ರಾರಂಭವಾಗಿ ಗಾಂಧಿನಗರದವರೆಗೆ ನಡೆಯಿತು.
ಸ್ವಚ್ಛ ಭಾರತದ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಹಲವಾರು ಸ್ಛರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.