ಜಾತ್ಯಾತೀತ ನೆಲೆಗಟ್ಟು ವಿಸ್ತಾರಗೊಳ್ಳಲಿ: ಪ್ರೊ.ಬಿ.ಕೆ.ಚಂದ್ರಶೇಖರ್
ಕೊಣಾಜೆ, ಸೆ. 29: ಜವಾಹಾರ್ ಲಾಲ್ ನೆಹರೂ, ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ಪಟೇಲ್ ಮೊದಲಾದವರು ಭಾರತದಲ್ಲಿ ಜಾತ್ಯಾತೀತ ನೆಲೆಗಳನ್ನು ಗಟ್ಟಿಗೊಳಿಸಿದ ಪ್ರಮುಖರಾಗಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಭಾರತೀಯ ಸೆಕ್ಯುಲರ್ವಾದದ ಬಗ್ಗೆ ಚಿಂತನೆಗಳು, ಚರ್ಚೆಗಳು ಹೆಚ್ಚೆಚ್ಚು ನಡೆಯ ಬೇಕಾದ ಅಗತ್ಯತೆ ಇದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ನೆಹರು ಚಿಂತನ ಕೇಂದ್ರದ ಆಶ್ರಯದಲ್ಲಿ ವಿವಿಯ ಹಳೆ ಸೆನೆಟ್ ಸಭಾಂಗಣದಲ್ಲಿ ಶನಿವಾರ ನಡೆದ `ಭಾರತೀಯ ಸೆಕ್ಯುಲರ್ವಾದ: ಸಹಚಿಂತನೆ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದು ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇಂತವರ ಚಿಂತನೆಗಳನ್ನು, ಜಾತ್ಯಾತೀತ ಚಿಂತನೆಗಳನ್ನು ಪೂರ್ಣಮಟ್ಟದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಪ್ರಮುಖವಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಇಂತಹ ಜಾತ್ಯಾತೀತ ಕಲ್ಪನೆಗಳು, ಚಿಂತನೆಗಳು ಬೆಳೆದರೆ ಸಮಾಜಕ್ಕೂ ಅನುಕೂಲ ವಾಗಲಿದೆ ಎಂದರು.
ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಸೆಕ್ಯುಲರ್ವಾದ ಕುರಿತು ವಿದ್ವತ್ಪೂರ್ಣವಾದ ಅಧ್ಯಯನಗಳು ಹಾಗೂ ವಾಗ್ವಾದಗಳು ನಡೆದುಕೊಂಡು ಬಂದಿವೆ. ವಿಶೇಷವಾಗಿ ಕಳೆದ ಮೂವತ್ತು ವರ್ಷಗಳಲ್ಲಿ ನಾವು ಸೆಕ್ಯುಲರ್ವಾದದ ಕುರಿತು ತಲೆಬಿಸಿ ಮಾಡಿಕೊಂಡಷ್ಟು ಇನ್ಯಾವುದೇ ತಾತ್ವಿಕ ವಿದ್ಯಾಮಾನದ ಕುರಿತು ಮಾಡಿಲ್ಲ ಎಂದೆನಿಸುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು, ನೆಹರೂರಂತಹ ಪ್ರಮುಖರು ರಾಷ್ಟ್ರದಲ್ಲಿ ಜಾತ್ಯಾತೀತ ತತ್ವಗಳನ್ನು ಇಟ್ಟುಕೊಂಡು ಮುನ್ನಡೆದಿದ್ದಾರೆ. ನಾವು ಜಾತ್ಯಾತೀತ ರಾಷ್ಟ್ರದಲ್ಲಿ ಇದ್ದೇವೆಯಾದರೂ ಕೆಲವೊಂದು ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಕಾಣಬೇಕಾಗಿದೆ. ಕ್ರೀಡೆಯು ಪ್ರತಿಯೊಬ್ಬರಲ್ಲಿಯೂ ಪ್ರಾಯೋಗಿಕವಾಗಿ ಜಾತಿ ಬೇಧ, ಮೇಲು ಕೀಳು ಎಂಬುದನ್ನು ಮರೆಯಾಗಿಸಿ ಪ್ರತಿಯೊಬ್ಬರನ್ನು ಒಟ್ಟುಗೂಡಿಸುವ ಶಕ್ತಿ ಹೊಂದಿದೆ. ಇಂತಹ ಮನೋಸ್ಥಿತಿಯನ್ನು ಪ್ರಾಯೋಗಿಕ ನೆಲೆಗಟ್ಟಿನ ಮೂಲಕ ವಿಸ್ತರಿಸುವಂತಹ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನೆಹರು ಚಿಂತನ ಕೇಂದ್ರದ ನಿರ್ದೇಶಕರಾದ ಪ್ರೊ.ರಾಜಾರಾಮ ತೋಳ್ಪಾಡಿ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.