ಎಸ್ಆರ್ಎಲ್ಎಂ ಘಟಕಕ್ಕೆ ಬೆಂಕಿ: 50 ಸಾವಿರ ರೂ. ನಷ್ಟ
ಅಜೆಕಾರು, ಸೆ. 29: ಶಿರ್ಲಾಲು ಗ್ರಾಪಂ ವ್ಯಾಪ್ತಿಯ ಸೂರ್ಯಂತೊಕ್ಲು ಎಂಬಲ್ಲಿರುವಒಣಕಸ ಸಂಗ್ರಹದ ಎಸ್ಆರ್ಎಲ್ಎಂ ಘಟಕಕ್ಕೆ ಸೆ.28ರಂದು ರಾತ್ರಿ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸಾವಿರಾರು ರೂ. ನಷ್ಟ ಉಂಟು ಮಾಡಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಪಂ, ಜಿಲ್ಲಾಡಳಿತ ಹಾಗೂ ಶಾಸಕರ ನಿರ್ದೇಶನದಂತೆ ಸ್ವಚ್ಚ ಭಾರತ್ ಮಿಷನ್ ಮತ್ತು ಸ್ವಚ್ಚ ಉಡುಪಿ ಮಿಷನ್ ಅಡಿಯಲ್ಲಿ ಸೂರ್ಯಂ ತೊಕ್ಲು ಬಸ್ ನಿಲ್ದಾಣ ಹಾಗೂ ಪಂಚಾಯತ್ ಅಂಗಡಿ ಕೋಣೆ ಇರುವ ಕಟ್ಟಡದಲ್ಲಿ ಎಸ್ಆರ್ಎಲ್ಎಂ ಘಟಕವನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗಿತ್ತು.
ಇಲ್ಲಿ ಮನೆ, ಅಂಗಡಿಗಳಿಂದ ಪ್ಲಾಸ್ಟಿಕ್, ಪೇಪರ್, ರಟ್ಟು, ಗಾಜು ಇತ್ಯಾದಿ ಒಣಕಸ ಸಂಗ್ರಹಿಸಿ ತರಬೇತಿ ಪಡೆದ ವೃತ್ತಿಪರ ಎಸ್ಆರ್ಎಲ್ಎಂ ಕಾರ್ಯ ಕರ್ತರ ಮೂಲಕ ವಿಂಗಡಿಸಿ ಮರು ಬಳಕೆಗಾಗಿ ಕಳುಹಿಸಲಾಗುತ್ತಿತ್ತು. ಈ ಘಟಕಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದ ಘಟಕದಲ್ಲಿದ್ದ 50,000ರೂ. ಮೌಲ್ಯದ ಸೊತ್ತುಗಳು ಸುಟ್ಟು ಹೋಗಿ ಹಾನಿ ಉಂಟಾಗಿದೆ ಎಂದು ಶಿರ್ಲಾಲ್ ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಗಮೇಶ್ ಬನಕರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.