ಉಡುಪಿ: ಬುದ್ಧಿಮಾಂದ್ಯ ತಂಗಿಯ ಮೇಲೆ ಅತ್ಯಾಚಾರ; ಸಹೋದರನಿಗೆ 10 ವರ್ಷ ಕಠಿಣ ಶಿಕ್ಷೆ
ಉಡುಪಿ, ಸೆ. 29: ಒಡಹುಟ್ಟಿದ ಅಪ್ರಾಪ್ತ ವಯಸ್ಸಿನ ಬುದ್ಧಿಮಾಂದ್ಯ ತಂಗಿಯ ಮೇಲೆಯೇ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿಸಿದ ಆರೋಪಿ ಸಹೋದರನಿಗೆ ಉಡುಪಿ ಜಿಲ್ಲಾ ವಿಶೇಷ ಮತ್ತು ಸತ್ರ ನ್ಯಾಯಾಲಯವು ಪೋಕ್ಸೊ ಕಾಯಿದೆಯಡಿ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಧರ್ (22) ಶಿಕ್ಷೆಗೆ ಗುರಿಯಾದ ಆರೋಪಿ.
14 ಹರೆಯದ 9ನೆ ತರಗತಿಯ ಬುದ್ಧಿಮಾಂದ್ಯ ಬಾಲಕಿ 2015ರ ಸೆ.7ರಂದು ವಾಂತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ಉಡುಪಿ ಮಹಿಳಾ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿದರು. ಪರೀಕ್ಷಿಸಿದ ವೈದ್ಯರ ಸಲಹೆಯಂತೆ ಆಕೆಯನ್ನು ಸ್ಕಾನಿಂಗ್ಗೆ ಒಳಪಡಿಸಿದಾಗ ಆಕೆ ಎರಡು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂತು.
ಈ ಬಗ್ಗೆ 2015ರ ಸೆ.16ರಂದು ನೊಂದ ಬಾಲಕಿಯ ತಂದೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಆರೋಪಿ ಸಹೋದರ ಶ್ರೀಧರ್ನನ್ನು 2016ರ ಫೆ.9ರಂದು ಬಂಧಿಸಿ, ನಂತರ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮರಕ್ಕೆ ಫಾಲಿಶ್ ಹಾಕುವ ಕೆಲಸ ಮಾಡುತ್ತಿದ್ದ ಶ್ರೀಧರ್, ಮನೆಯಲ್ಲಿ ಯಾರು ಇಲ್ಲದ ಸಂದರ್ಭ ತನ್ನ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ದೂರಲಾಗಿದೆ. ಬಂಧಿತನಾಗಿ ಜೈಲಿನಲ್ಲಿದ್ದ ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಎರಡು ಬಾರಿ ತಿರಸ್ಕರಿಸಿದೆ. ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಸೆ.28ರಂದು ತೀರ್ಪು ನೀಡಿ, ಸೆ.29ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಆದೇಶ ನೀಡಿದರು. ಅದರಂತೆ ಇಂದು ಆರೋಪಿಗೆ ಸಾಕ್ಷನಾಶ ಕಾಯಿದೆಯಡಿ 3 ವರ್ಷ ಜೈಲು ಶಿಕ್ಷೆ 5 ಸಾವಿರ ರೂ. ದಂಡ, ಅತ್ಯಾಚಾರ ಕಾಯಿದೆಯಡಿ 10 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ಪೊಕ್ಸೋ ಕಲಂ ನಾಲ್ಕರಡಿಯಲ್ಲಿ 10 ವರ್ಷ ಜೈಲು ಶಿಕ್ಷೆ ಹಾಗೂ 5ಸಾವಿರ ರೂ. ದಂಡ, ಆರರಡಿಯಲ್ಲಿ 10 ವರ್ಷ ಕಠಿಣ ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ನ್ಯಾಯಾ ಧೀಶರು ತೀರ್ಪು ನೀಡಿದರು.
ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಮತ್ತು ನೊಂದ ಬಾಲಕಿಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿ ದ್ದಾರೆ. ಅಭಿಯೋಜನೆ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.
ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ಆರೋಪಿ
ಬುದ್ಧಿಮಾಂದ್ಯ ನೊಂದ ಬಾಲಕಿ ಆರಂಭದಲ್ಲಿ ತನ್ನ ಶಾಲೆಯ 10ನೆ ತರಗತಿಯ ವಿದ್ಯಾರ್ಥಿ ಮೇಲೆ ಅನುಮಾನ ವ್ಯಕ್ತಪಡಿಸಿ, ಆತನೇ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿದ್ದಳು. ಇದರಿಂದ ಮನನೊಂದ ವಿದ್ಯಾರ್ಥಿ ಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಆ ಸಂದರ್ಭದಲ್ಲಿ ನಡೆದಿತ್ತು.
ನಂತರ ಆಕೆ ತನ್ನ ಸಹೋದರ ಶ್ರೀಧರ್ ಹೇಳಿಕೊಟ್ಟಂತೆ ಇತರರ ಮೇಲೆ ಸಂಶಯ ವ್ಯಕ್ತಪಡಿಸಿ, ಪೊಲೀಸರ ಮುಂದೆ ಹೇಳಿಕೆ ನೀಡಿ ನಂತರ ಬದಲಾಯಿ ಸುತ್ತಿದ್ದಳು. ಇದರಿಂದ ಪೊಲೀಸರಿಗೆ ಈ ಪ್ರಕರಣ ಬೇಧಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಹೀಗೆ ಆಕೆ ತನ್ನ ಸಹೋದರ ಸೇರಿದಂತೆ ಒಟ್ಟು ಐದು ಮಂದಿಯ ಮೇಲೆ ಸಂಶಯ ವ್ಯಕ್ತಪಡಿಸಿದ್ದಳು.
ನೊಂದ ಬಾಲಕಿ ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಳು. ಭ್ರೂಣವು ಬುದ್ಧಿಮಾಂದ್ಯಳಾಗಿರುವ ಬಾಲಕಿಯ ಆರೋಗ್ಯ ದ ಮೇಲೆ ದುಷ್ಪಾರಿಣಾಮ ಬೀರುವುದರಿಂದ ಅದನ್ನು ತೆಗೆಸಬೇಕೆಂದು ವೈದ್ಯರು ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದ ಅನುಮತಿಯಂತೆ ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಗರ್ಭಪಾತ ಮಾಡಲಾಯಿತು.
ಬಳಿಕ ಪೊಲೀಸರು ಭ್ರೂಣವನ್ನು ಡಿಎನ್ಎ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದರು. ಅದೇ ರೀತಿ ಸಂಶಯಾಸ್ಪದ ಐವರು ಆರೋಪಿಗಳ ರಕ್ತದ ಮಾದರಿಯನ್ನು ಕೂಡ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಡಿಎನ್ಎ ವರದಿಯಲ್ಲಿ ನೊಂದ ಬಾಲಕಿಯ ಮೇಲೆ ಸ್ವತಃ ಸಹೋದರನೇ ಅತ್ಯಾಚಾರ ಎಸಗಿ ಗರ್ಭಿಣಿಯ್ನಾಗಿ ಮಾಡಿರುವುದು ದೃಢಪಟ್ಟಿತು.
ಮನೆಯವರಿಂದ ವ್ಯತಿರಿಕ್ತ ಸಾಕ್ಷ
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಒಟ್ಟು 37 ಸಾಕ್ಷಿಗಳ ಹೇಳಿಕೆಯನ್ನು ಪಡೆದು, 54 ದಾಖಲೆ ಪತ್ರಗಳನ್ನು ಪರಿ ಶೀಲಿಸಿದರು. ಆದರೆ ವಿಚಾರಣೆ ಸಂದರ್ಭ ಪ್ರಕರಣದ ಪ್ರಮುಖ ಸಾಕ್ಷಿಗಳಾದ ನೊಂದ ಬಾಲಕಿ ಹಾಗೂ ಆಕೆಯ ತಂದೆ ಮತ್ತು ತಾಯಿ ನ್ಯಾಯಾಧೀಶರ ಮುಂದೆ ಶ್ರೀಧರ್ ಈ ಕೃತ್ಯ ಎಸಗಿಲ್ಲ ಎಂಬುದಾಗಿ ವ್ಯತಿರಿಕ್ತ ಸಾಕ್ಷವನ್ನು ನುಡಿದಿದ್ದರು. ಆದರೆ ಈ ಪ್ರಕರಣದಲ್ಲಿ ಡಿಎನ್ಎ ವರದಿ ಹಾಗೂ ಇತರ ದಾಖಲೆ ಪತ್ರಗಳೇ ಪ್ರಮುಖ ಸಾಕ್ಷಗಳಾಗಿದ್ದವು. ಅದರಂತೆಯೇ ಆರೋಪಿ ಯನ್ನು ದೋಷಿ ಎಂಬುದಾಗಿ ತೀರ್ಪು ನೀಡಲಾಯಿತು.