ಪಿಯು ಉಪನ್ಯಾಸಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಸೆ.29: ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಸಂಬಂಧ ಅ.11ರಿಂದ 23ರವರೆಗೆ ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.
ರಾಜ್ಯ ಸರಕಾರವು ಸೆ.15ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಉಪನ್ಯಾಸಕರ ವೃಂದದ ಹುದ್ದೆಯ ನೇರ ನೇಮಕಾತಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳನ್ನು ನಿಗದಿಪಡಿಸಲು ಸರಕಾರ ಉದ್ದೇಶಿಸಿದೆ.
ಇದರಿಂದಾಗಿ, ಸೂಕ್ತ ಕರಡು ತಿದ್ದುಪಡಿ ನಿಯಮಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೂಚಿಸಿ ಮತ್ತು ಉದ್ದೇಶಿತ ತಿದ್ದುಪಡಿ ನಿಯಮಗಳನ್ನು ಜಾರಿಗೆ ತರುವವರೆಗೆ ಚಾಲ್ತಿಯಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗಳನ್ನು ಮುಂದೂಡುವಂತೆ ನಿರ್ದೇಶಿಸಲಾಗಿದೆ.
ಆದುದರಿಂದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸೆ.17 ಮತ್ತು ಸೆ.28ರ ಪತ್ರದಲ್ಲಿ ತಿಳಿಸಿರುವಂತೆ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಸಂಬಂಧ ಅ.11 ರಿಂದ 23ರವರೆಗೆ ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.
ಆಯುಷ್ ಸೀಟು ಹಂಚಿಕೆ: ಈ ಸುತ್ತಿನಲ್ಲಿ, ರದ್ದುಪಡಿಸಿಕೊಂಡಿರುವ/ಕಾಲೇಜಿಗೆ ಪ್ರವೇಶ ಪಡೆಯದೆ ಇರುವ ಅಥವಾ ಸೀಟ್ ಮ್ಯಾಟ್ರಿಕ್ಸ್ಗೆ ಹೊಸದಾಗಿ ಸೇರ್ಪಡೆಯಾಗಬಹುದಾದ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಹೋಮಿಯೋಪತಿ ಆಯುಷ್ ಸೀಟುಗಳನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಆಯ್ಕೆಗೆ ಅವಕಾಶ ಕಲ್ಪಿಸಲಾಗುವುದು.
ಕಾಲೇಜುವಾರು, ಕೋರ್ಸುವಾರು ಮತ್ತು ಕ್ಯಾಟಗರಿವಾರು ವಿವರಗಳುಳ್ಳ ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಾಧಿಕಾರದ ವೆಬ್ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗುವುದು. ಈ ಸೀಟುಗಳ ಜೊತೆಯಲ್ಲಿ ಸೀಟು ಹಂಚಿಕೆಯ ಸಂದರ್ಭದಲ್ಲಿ ಆಗಿಂದಾಗ್ಗೆ ಉದ್ಭವಿಸುವ ಆಯುಷ್ ಸೀಟುಗಳನ್ನೂ ಹಂಚಿಕೆ ಮಾಡಲಾಗುವುದು. ಇಚ್ಚೆಯುಳ್ಳ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವೇಳಾಪಟ್ಟಿಯಂತೆ ಈ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ.
ಸೆ.20ರ ಆಯುಷ್ ಇಲಾಖೆಯ ಪತ್ರದ ಅನ್ವಯ, ಈಗಾಗಲೇ ಆನ್ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಿ ದಾಖಲಾತಿ ಪರಿಶೀಲನೆಗೆ ಹಾಜರಾಗದೇ ಇರುವ ಅರ್ಹ ಅಭ್ಯರ್ಥಿಗಳು, ಅ.1ರಂದು ಎಲ್ಲ ಮೂಲ ದಾಖಲಾತಿಗಳೊಂದಿಗೆ ಬೆಂಗಳೂರು ಕೇಂದ್ರದಲ್ಲಿ ಹಾಜರಾಗಬಹುದಾಗಿದೆ ಹಾಗೂ ಎರಡನೇ ಸುತ್ತಿಗೆ ಇಚ್ಚೆ/ಆಯ್ಕೆಗಳನ್ನು ದಾಖಲಿಸಲು ಅರ್ಹತೆಯನ್ನು ಪಡೆಯಬಹುದಾಗಿದೆ.