ಮರೆವು ರೋಗಿಗಳ ಆರೈಕೆ ಅಗತ್ಯ: ಸಚಿವ ಯು.ಟಿ.ಖಾದರ್
ಅಲ್ಝೈಮರ್ ಜಾಗೃತಿಗಾಗಿ ‘ಪರ್ಪಲ್ ರನ್’ ಮ್ಯಾರಥಾನ್
ಮಂಗಳೂರು, ಸೆ.30: ಇತ್ತೀಚೆಗೆ ಮರೆವು ಕಾಯಿಲೆಗೆ ಹೆಚ್ಚು ಜನರು ತುತ್ತಾಗುತ್ತಿದ್ದು, ಇದರ ಬಗ್ಗೆ ಜಾಗೃತಿ ಅಗತ್ಯವಾಗಿ ಆಗಬೇಕಾಗಿದೆ. ಮರೆವು ರೋಗಕ್ಕೆ ತುತ್ತಾದವರನ್ನು ನಿರ್ಲಕ್ಷಿಸದೆ ಅವರನ್ನು ಆರೈಕೆ ಮಾಡಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಫೋರಮ್ ಮಾಲ್ ವತಿಯಿಂದ ನಗರದ ಫೋರಮ್ ಫೀಝಾ ಮಾಲ್ ಆವರಣದಲ್ಲಿ ಅಲ್ಝೈಮರ್ ಜಾಗೃತಿಗಾಗಿ ಇಂದು ನಡೆದ ಪರ್ಪಲ್ ರನ್ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ತಪ್ಪಿನಿಂದಲೇ ನಮಗೆ ರೋಗಗಳು ಬರುತ್ತಿವೆ. ಸರಿಯಾದ ಆಹಾರ ತೆಗೆದುಕೊಳ್ಳದೆ, ವ್ಯಾಯಾಮ ಮಾಡದೇ ಒತ್ತಡದ ಜೀವನದಲ್ಲಿ ಬದುಕುವ ಕಾರಣದಿಂದ ಹಲವಾರು ರೋಗಗಳಿಗೆ ಇಂದು ನಾವು ತುತ್ತಾಗುತ್ತಿದ್ದೇವೆ. ಆದ್ದರಿಂದ ಸರಿಯಾದ ಆಹಾರ ಪದ್ಧತಿ ಅನುಸರಿಸಿ ಪ್ರತಿನಿತ್ಯ ವ್ಯಾಯಾಮ ಮಾಡುವುರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಒಲಿಂಪಿಯನ್ ಪೂವಮ್ಮ ಮಾತನಾಡಿ, ವ್ಯಾಯಾಮ, ಓಟವನ್ನು ಕೇವಲ ಒಂದು ದಿನಕ್ಕೆ ಸೀಮಿಗೊಳಿಸಬಾರದು ಎಂದು ಹೇಳಿದರು.
ಫೋರಮ್ ಫಿಝಾ ಮಾಲ್ನ ಮಾಲಕ ಬಿ.ಎಂ.ಫಾರುಕ್, ಎಸ್ಎಲ್ ಶೇಟ್ ಡೈಮಂಡ್ನ ಮಾಲಕಿ ಪದ್ಮಾ ಶೇಟ್, ಆರ್ಜೆ ರಶ್ಮಿ ಉಳ್ಳಾಲ್, ಫೋರಮ್ ಫಿಝಾ ಮಾಲ್ನ ಸೆಂಟರ್ ಹೆಡ್ ಫಯಾಝ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
5 ಕಿ.ಮೀ., 10 ಕಿ.ಮೀ. ಹಾಗೂ 21 ಕಿಮೀಯಂತೆ 3 ವಿಭಾಗಗಳಲ್ಲಿ ಪರ್ಪಲ್ ರನ್ ನಡೆಯಿತು. ಬೆಳಗ್ಗೆ 5 ಗಂಟೆಗೆ ಆರಂಭವಾದ ಪರ್ಪಲ್ ರನ್ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.