ಶಿಸ್ತು ಎನ್ನುವುದು ಆಂತರಿಕವಾದುದ್ದು: ವಿವೇಕ್ ಆಳ್ವ
ಮೂಡುಬಿದಿರೆ, ಸೆ.30: ಯಾಂತ್ರಿಕ ಜಗತ್ತಿನಿಂದಾಗಿ ಮಾನವೀಯ ಸಂಬಂಧಗಳು ನಶಿಸಿಹೋಗುತ್ತಿದ್ದು, ಅವುಗಳಿಂದ ಮನಸನ್ನು ಮುಕ್ತವಾಗಿಟ್ಟು ಕೊಳ್ಳಬೇಕು. ಪ್ರೇರಣೆಯನ್ನು ಬಾಹ್ಯಮೂಲಗಳಿಂದ ಪಡೆದುಕೊಂಡರೆ ಶಿಸ್ತು ಎನ್ನುವುದು ಆಂತರಿಕವಾದುದು. ಶಿಸ್ತು ಮತ್ತು ಸಂಯಮವನ್ನು ನಮ್ಮ ಬಾಳಿದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಸಾಧಿಸಬೇಕು ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇನ ವಿ. ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ 18ನೇ ಕರ್ನಾಟಕ ಬೆಟಾಲಿಯನ್ನ ಕಂಬೈನ್ಡ್ ಆರ್ಡಿಸಿ ವಾರ್ಷಿಕ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು 18ನೇ ಕರ್ನಾಟಕ ಬೆಟಾಲಿಯನ್ನ ಆಡಳಿತಾಧಿಕಾರಿ ಮತ್ತು ಡೆಪ್ಯುಟಿ ಕಮಾಂಡೆಂಟ್ ಲೆಫ್ಟಿನೆಂಟ್ ಗ್ರೇಷಿಯಸ್ ಸಿಕ್ವೇರಾ, ನಿಮ್ಮ ಜೀವನವನ್ನು ಅಪ್ರಯೋಜಕ ಕಾರ್ಯದಲ್ಲಿ ತೊಡಗಿಸಿಕೊಳ್ಳದೆ, ಸದಾ ಯಶಸ್ಸಿಗೆ ಪೂರಕವಾಗುವ ಕಾಯದಲ್ಲಿ ತೊಡಗಿಸಿಕೊಳ್ಳಿ. ಏಕತೆ ಮತ್ತು ಸಂಯಮಗಳನ್ನು ಬೆಳೆಸಿಕೊಂಡು ಕಠಿಣ ಪರಿಶ್ರಮದಿಂದ ಗುರಿಯನ್ನು ಸಾಧಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಮಾಂಡಿಂಗ್ ಅಧಿಕಾರಿ ಕೆಡೆಟ್ ಮನೋಜ್ ವಿ. ಯು, 18ನೇ ಕರ್ನಾಟಕ ಬೆಟಾಲಿಯನ್ನ ಸುಬೇದರ್ ಮೇಜರ್ ರಾಜ್ ಗುರುಂಗ್, ಲೆಫ್ಟಿನೆಂಟ್ ಪ್ರವೀಣ್, ಲೆಫ್ಟಿನೆಂಟ್ ಅಶೋಕ್, ಮುಖ್ಯ ಅಧಿಕಾರಿ ಜಾರ್ಜ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕ್ಯಾಂಪ್ ಅಡ್ಜುಟೆಂಟ್ ಮತ್ತು ಶಿಬಿರಾಧಿಕಾರಿ ಕ್ಯಾಪ್ಟನ್ ಡಾ ರಾಜೇಶ್ ಬಿ ನಿರೂಪಿಸಿದರು.
ಒಂದು ತಿಂಗಳ ವಾರ್ಷಿಕ ಗಣರಾಜ್ಯೋತ್ಸವ ಪೂರ್ವ ತಯಾರಿ ಶಿಬಿರದಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಮಡಿಕೇರಿಯ 30ಕ್ಕಿಂತಲೂ ಹೆಚ್ಚು ಶಿಕ್ಷಣ ಸಂಸ್ಥೆಗಳ 600ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಈ ಶಿಬಿರದಲ್ಲಿ ಕವಾಯತು, ವ್ಯಪನ್ ಟ್ರೈನಿಂಗ್, ಮ್ಯಾಪ್ ರೀಡಿಂಗ್ನಲ್ಲಿ ತರಬೇತಿ ನೀಡಲಾಗುವುದು. ಒಂದು ತಿಂಗಳ ಅವಧಿಯಲ್ಲಿ ಮೂರು ವಿವಿಧ ಶಿಬಿರಗಳು ನಡೆಯಲ್ಲಿದ್ದು, ಆಳ್ವಾಸ್ ಕಾಲೇಜು ಶಿಬಿರಾರ್ಥಿಗಳಿಗೆ ಊಟ, ವಸತಿ ಹೀಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒದಗಿಸುತ್ತಿದೆ.