ಬಂಟ್ವಾಳ: ದುಸ್ಥಿತಿಯಲ್ಲಿದ್ದ ಬಸ್ ತಂಗುದಾಣಕ್ಕೆ ಹೊಸ ರೂಪ
ಬಂಟ್ವಾಳ, ಸೆ. 30: ಬಂಟ್ವಾಳ ಪೇಟೆಯ ನಡುವೆ ಬಡ್ಡಕಟ್ಟೆಯಲ್ಲಿ ಕಸದ ರಾಶಿ ತುಂಬಿದ, ಗಲೀಜಾಗಿದ್ದ, ಮನುಷ್ಯರಿಗೆ ಪ್ರವೇಶಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬಸ್ ತಂಗುದಾಣವೀಗ ಹೊಸ ರೂಪ ಪಡೆಯುತ್ತಿದೆ.
ಅ. 2ರಂದು ಗಾಂಧಿ ಜಯಂತಿಯಂದು ಇದು ಪ್ರಯಾಣಿಕರ ಬಳಕೆಗೆ ಸಿದ್ಧವಾಗಲಿದೆ. ಪುರಸಭೆ ಬಂಟ್ವಾಳ ನೇತೃತ್ವದಲ್ಲಿ ಜೇಸಿ ಬಂಟ್ವಾಳ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಬಂಟ್ವಾಳ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಸ್ವಚ್ಛತಾ ಕಾರ್ಯಕ್ರಮ ಇಷ್ಟಕ್ಕೆಲ್ಲ ಕಾರಣವಾದೆ.
ಸಾರ್ವಜನಿಕರಿಗೆ ಉಪಯೋಗಕ್ಕೇ ಇದ್ದೂ ಇಲ್ಲದಂತಿರುವ ಬಸ್ ತಂಗುದಾಣವನ್ನು ಉಪಯೋಗಕ್ಕೆ ಅನುಕುಲ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಮುತುವರ್ಜಿಯಲ್ಲಿರೋಟರಿ ಕ್ಲಬ್ ಬಂಟ್ವಾಳ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಬಡ್ಡಕಟ್ಟೆ ಬಸ್ ತಂಗುದಾಣವನ್ನು ಮಾದರಿ ತಂಗುದಾಣವನ್ನಾಗಿ ರೂಪಿಸಲಾಯಿತು. ಸಾರ್ವಜನಿಕ ಸಂಘ ಸಂಸ್ಥೆಗಳು, ಪುರಸಭೆಯ ಸಹಕಾರದೊಂದಿಗೆ ಹೊಸ ರೂಪದಲ್ಲಿ ಬಸ್ ನಿಲ್ದಾಣವೀಗ ಮರುನಿರ್ಮಾಣವಾಗಿದೆ.
ಹೊಸ ರೂಪ
ಬಸ್ ನಿಲ್ದಾಣಕ್ಕೆ ಸುಣ್ಣ ಬಣ್ಣ ಬಳಿದು ಹೊಸ ರೂಪ ಬಂದಿದೆ. ಇನ್ನು ಬೋರ್ಡು ಲಗತ್ತಿಸಿ, ಸಾರ್ವಜನಿಕ ಉಪಯೋಗಕ್ಕೆ ಒದಗಿಸುವುದಷ್ಟೇ ಬಾಕಿ. ಆದರೆ, ಬಂಟ್ವಾಳ ಪುರಸಭೆಯು ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ಬಸ್ಗಳು ನಿಲ್ದಾಣದ ಒಳಗೆ ಬಂದು ಪ್ರಯಾಣಿಕರ ತಂಗುದಾಣದ ಬಳಿಯೇ ನಿಲ್ಲಿಸಿ ಅಲ್ಲಿಯಷ್ಟೇ ಪ್ರಯಾಣಿಕರನ್ನು ಹತ್ತಿಸಬೇಕು ಹಾಗೂ ನಿಲ್ದಾಣದ ಎದುರು ವಾಹನ ಪಾರ್ಕಿಂಗ್ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯ.